ರಾಯ್ಪುರ: ವಿಧಾನಸಭೆ ಚುನಾವಣೆಗೆ ಮೂರು ದಿನಗಳಷ್ಟೇ ಇರುವ ಹೊತ್ತಿನಲ್ಲಿ ಛತ್ತೀಸ್ಗಢದಲ್ಲಿ (Chhattisgarh) ಬಿಜೆಪಿ ನಾಯಕನ (BJP Leader) ಹತ್ಯೆಯಾಗಿದೆ. ಮಾವೋವಾದಿಗಳು ಚುನಾವಣಾ ಪ್ರಚಾರದಲ್ಲಿದ್ದ ಬಿಜೆಪಿ ನಾಯಕನ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ರತನ್ ದುಬೆ ಅವರು ಬಿಜೆಪಿಯ ನಾರಾಯಣಪುರ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದರು. ಜಿಲ್ಲೆಯ ಕೌಶಲನರ್ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ. ದುಬೆ ಅವರು ಜಿಲ್ಲಾ ಪಂಚಾಯತ್ನಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಹತ್ಯೆಯ ತನಿಖೆಗಾಗಿ ತಂಡವೊಂದು ಸ್ಥಳಕ್ಕೆ ತಲುಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ವಿಧಾನಸಭಾ ಚುನಾವಣೆಗಾಗಿ ಛತ್ತೀಸ್ಗಢದಲ್ಲಿ (Chhattisgarh Polls) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಶುಕ್ರವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ‘ಮೋದಿ ಕಿ ಗ್ಯಾರಂಟಿ 2023’ (Modi Ki Guarantee) ಎಂಬ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಛತ್ತೀಸ್ಗಢದ ಜನರಿಗೆ ಬಿಜೆಪಿಯ ಪ್ರಮುಖ ಭರವಸೆಗಳನ್ನು ಘೋಷಿಸಿದ್ದರು.