ಹಾಸನ: ಶಾಂತಿ, ಸಹಬಾಳ್ವೆ ಜೊತೆಗೆ ಸರ್ವಧರ್ಮ ಸಮನ್ವಯ ಸಾರುವ ಜಿಲ್ಲೆಯ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿದೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ರಥೋತ್ಸವದ ವಿಶೇಷತೆ ಎಂದರೆ ಶಾಂತಿ-ಸಹಬಾಳ್ವೆ ಸಾರುವ ಸದುದ್ದೇಶದಿಂದ ದೊಡ್ಡ ಮೇದೂರಿನ ಖಾದ್ರಿ ವಂಶಸ್ಥರು ಖುರಾನ್ ಪಠಣ ಒಂದೆಡೆಯಾದ್ರೆ, ನಭದಲ್ಲಿ ಹದ್ದು ಹಾರುವುದು ಮತ್ತೊಂದೆಡೆ. ಈ ಕ್ರಿಯೆ ನಡೆದ ನಂತರವೇ ಅಲಂಕೃತ ರಥ ಮುಂದೆ ಸಾಗುತ್ತದೆ. ವಿಶ್ವಪ್ರಸಿದ್ಧ ಬೇಲೂರಿನ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿದೆ.
ಗುರುವಾರ ಬೆಳಗ್ಗೆ ಸುಮಾರು 11.15 ಕ್ಕೆ ವಿಶೇಷ ಪೂಜೆ ನಂತರ ಸಿಂಗಾರಗೊಂಡಿದ್ದ ದೊಡ್ಡ ರಥ, ಉತ್ಸವ ಮೂರ್ತಿ ಹೊತ್ತು ಮುಂದೆ ಸಾಗುತ್ತಿದ್ದಂತೆಯೇ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿ ಭಾವ ಪರವಶರಾದರಾಗಿದ್ದಾರೆ.