ಚೆನ್ನೈ: ಮದುವೆಯಾಗಿ 35 ದಿನಗಳ ನಂತರ ಪತ್ನಿ 3 ಲಕ್ಷ ನಗದು ಹಾಗೂ ಒಡವೆಯನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಚೆನ್ನೈನ ಸಾಹುಕಾರ ಪೇಟೆಯಲ್ಲಿ ನಡೆದಿದೆ.
ಜಯಶ್ರೀ ಎಂಬಾಕೆ ಹಣದೊಂದಿಗೆ ಪರಾರಿಯಾದ ಪತ್ನಿ. ಒಂದು ತಿಂಗಳ ಹಿಂದೆ ಸಾಹುಕಾರ ಪೇಟೆಯಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದ 45 ವರ್ಷದ ಆನಂದ್ ಆರ್.ಜೈನ್ ಎಂಬವರ ಜೊತೆ ಜಯಶ್ರೀ ಮದುವೆ ಆಗಿತ್ತು. ಮ್ಯಾಟ್ರಿಮೋನಿಯಾ ನಡೆಸುತ್ತಿದ್ದ ಲಕ್ಷ್ಮಿ ಎಂಬ ಮಹಿಳೆ ತೋರಿಸಿದ ಜಯಶ್ರೀ ಎಂಬಾಕೆಯನ್ನು ಮದುವೆ ಆಗಿದ್ದರು. ಆರಂಭದಲ್ಲಿ ಲಕ್ಷ್ಮಿ ಹೆಣ್ಣು ಹುಡುಕಿ ಕೊಡಲು 2.5 ಲಕ್ಷ ರೂ. ಹಣ ನೀಡಬೇಕೆಂದು ಷರತ್ತು ವಿಧಿಸಿದ್ದಳು.
ಲಕ್ಷ್ಮಿ ಷರತ್ತು ಒಪ್ಪಿದ ಆನಂದ್ 1.25 ಲಕ್ಷ ರೂ. ನೀಡಿ ಜಯಶ್ರೀಯನ್ನು ಮದುವೆ ಆಗಿದ್ದರು. ಆಗಸ್ಟ್ 15ರಂದು ಎನ್ಎಸ್ಸಿ ಬೋಸ್ ರಸ್ತೆ ಬಳಿಯ ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆದಿತ್ತು. ಮದುವೆಯಾದ 35 ನೇ ದಿನಕ್ಕೆ ಗುರುವಾರ ಆನಂದ್ ಕೆಲಸ ಮುಗಿಸಿ ಮನೆಗೆ ಬಂದಾಗ ಲಕ್ಷ್ಮಿ ನಾಪತ್ತೆಯಾಗಿದ್ದಳು. ಪತ್ನಿ ಕಾಣದೇ ಇದ್ದಾಗ ಆನಂದ್ ಫೋನ್ ಮಾಡಿದ್ದಾರೆ. ಆದ್ರೆ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಸ್ವಲ್ಪ ಸಮಯದ ಬಳಿಕ ಮನೆಯಲ್ಲಿ 3 ಲಕ್ಷ ನಗದು, ಚಿನ್ನಾಭರಣ ಸಹ ನಾಪತ್ತೆ ಆಗಿರೋದು ಆನಂದ್ ಗಮನಕ್ಕೆ ಬಂದಿದೆ.
ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾದ ಕೂಡಲೇ ಮದುವೆ ಮಾಡಿಸಿದ್ದ ಜಯಶ್ರೀಗೂ ಕರೆ ಮಾಡಿದ್ರೆ, ಆಕೆಯ ಫೋನ್ ಕೂಡ ಸ್ವಿಚ್ಛ್ ಆಫ್ ಆಗಿದೆ. ಅನುಮಾನಗೊಂಡ ಆನಂದ್ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಜಯಶ್ರೀ ಮತ್ತು ಲಕ್ಷ್ಮಿ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv