ಚೆನ್ನೈ; ಬೆಕ್ಕು ಮತ್ತು ನಾಯಿ ಮಾಸ್ಕ್ ಧರಿಸಿ ಜನಪ್ರಿಯ ಚಿನ್ನದಂಗಡಿಯಿಂದ 30 ಕೆ.ಜಿ ಚಿನ್ನಾಭರಣವನ್ನು ದೋಚಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆದಿದೆ.
ಮಾಸ್ಕ್ ಧರಿಸಿ ಮಳಿಗೆಯ ಗೋಡೆ ಕೊರೆದು ಒಳಬಂದ ಇಬ್ಬರು ಕಳ್ಳರು, ನಗರದ ಹೆಸರಾಂತ ಆಭರಣ ಮಳಿಗೆ ಲಲಿತ ಜ್ಯುವೆಲ್ಲರಿ ಅಂಗಡಿಯಲ್ಲಿ ಸುಮಾರು 30 ಕೆಜಿಯ 800 ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ ಆಭರಣಗಳ ಒಟ್ಟು ಮೌಲ್ಯ 13 ಕೋಟಿ ಇದೆ ಎಂದು ಪೊಲೀಸರು ತಿಳಿಸಿದರು.
ಈ ವಿಚಾರದ ಬಗ್ಗೆ ಮಾತನಾಡಿರುವ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ಕಿರಣ್ ಕುಮಾರ್, ಶೋ ರೂಮ್ಗೆ 6 ಜನ ಸೆಕ್ಯುರಿಟಿ ಗಾರ್ಡ್ ಗಳು ಇದ್ದರೂ ಗೋಡೆ ಕೊರೆದು ಒಳಗೆ ಬಂದಿರುವ ಕಳ್ಳರು ಸುಮಾರು 90 ನಿಮಿಷ ಅಂಗಡಿಯ ಒಳಗಡೆ ಓಡಾಡಿ 30 ಕೆಜಿ 13 ಕೋಟಿ ಬೆಲೆ ಬಾಳುವ 800 ಬಗೆಯ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಮುಂಜಾನೆ ಸಿಬ್ಬಂದಿ ಬಂದು ಬಾಗಿಲು ತೆರೆದಾಗ ನಮಗೆ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಬಹಳ ಪ್ಲಾನ್ ಮಾಡಿ ಕಳ್ಳತನ ಮಾಡಿರುವ ಕಳ್ಳರು ಪೊಲೀಸ್ ಶ್ವಾನಗಳು ನಮ್ಮನ್ನು ಗುರುತಿಸಬಾರದು ಎಂಬ ಕಾರಣಕ್ಕೆ ಅವರು ಓಡಾಡಿದ ಜಾಗದಲ್ಲೆಲ್ಲ ಖಾರದ ಪುಡಿ ಹಾಕಿದ್ದಾರೆ. ಒಟ್ಟು ಮೂವರು ಸೇರಿ ಈ ಕಳ್ಳತನ ಮಾಡಿದ್ದು, ಇಬ್ಬರು ಅಂಡಿಯೊಳಗೆ ಬಂದರೆ ಒಬ್ಬ ಹೊರಗಡೆ ನಿಂತು ಪೊಲೀಸ್ ಬರುವುದನ್ನು ನೋಡುತ್ತಿರುತ್ತಾನೆ. ಆದರೆ ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎ ಅಮಲ್ರಾಜ್, ಕಳ್ಳರ ಸುಳಿವು ಹುಡುಕಲು ಸ್ಥಳೀಯ ಪೊಲೀಸರು ಹೋಗಿ ಸ್ಥಳ ಪರಿಶೀಲನೆ ಮಾಡಿ ಬಂದಿದ್ದಾರೆ. ಕೆಲ ಮುಖ್ಯ ಮಾಹಿತಿಗಳು ದೊರಕಿವೆ. ಆರೋಪಿಗಳನ್ನು ಬಂಧಿಸಲು ನಾವು ಹಲವಾರು ತಂಡಗಳನ್ನು ರಚಿಸಿದ್ದೇವೆ. ಅದಷ್ಟೂ ಬೇಗ ಅವರನ್ನು ಕಂಡುಹಿಡಿಯುತ್ತೇವೆ ಎಂದು ಹೇಳಿದ್ದಾರೆ.