ಬೆಂಗಳೂರು: ಚೆನ್ನೈ ಸಂಬಂಧಿಕರಿಗೆ ಬೆಂಗಳೂರು ಜನರು ಇಲ್ಲಿಗೆ ಬರುವುದು ಬೇಡ ಎಂದು ಹೇಳಲು ಶುರು ಮಾಡಿದ್ದಾರೆ.
ಹೌದು. ಯಾಕೆಂದರೆ ಚೆನ್ನೈನಲ್ಲಿ ಈಗ ನೀರಿಗೆ ತೊಂದರೆ ಶುರುವಾಗಿದ್ದು ಕುಡಿಯುವುದಕ್ಕೂ ನೀರಿಲ್ಲ. ಸ್ನಾನಕ್ಕೂ ನೀರಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಚೆನ್ನೈ ನಿವಾಸಿಗಳು ಬಹುತೇಕ ಗಂಟುಮೂಟೆ ಕಟ್ಟಿಕೊಂಡು ಕಾವೇರಿಯನ್ನರಿಸಿ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದಾರೆ.
ಚೆನ್ನೈನ ಬಹುತೇಕ ನಿವಾಸಿಗಳು ಬೆಂಗಳೂರಿನ ಸ್ಲಂಗಳಲ್ಲಿ ವಾಸ್ತವ್ಯ ಇರುವ ಸಂಬಂಧಿಕರ ನಿವಾಸಕ್ಕೆ ಬರುತ್ತಿದ್ದಾರೆ. ಈ ಮೂಲಕ ಹಿಂದೆ ಸಂಬಂಧಿಕರನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದ ಬೆಂಗಳೂರು ನಿವಾಸಿಗಳಿಗೆ ಈಗ ಚೆನ್ನೈ ಸಂಬಂಧಿಕರನ್ನು ಕಂಡರೆ ಭಯ ಶುರುವಾಗಿದೆ. ಏಕೆಂದರೆ ಈಗ ನಮಗೆ ನೀರು ಬರುತ್ತಿಲ್ಲ. ಸಂಬಂಧಿಕರು ನೀರಿಲ್ಲ ಎಂದು ಇಲ್ಲಿಗೆ ಬರುತ್ತಿದ್ದಾರೆ. ನಾವೇನು ಮಾಡೋಣ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈಗ ಮುಂಗಾರು ಕೈ ಕೊಟ್ಟಿರುವುದರಿಂದ ಬೆಂಗಳೂರಿನ ಸ್ಲಂಗಳಿಗೆ ಬಹುತೇಕ ವಾರಕ್ಕೆರಡು ಬಾರಿ ನೀರು ಪೂರೈಕೆ ಆಗುತ್ತಿದೆ. ಚೆನ್ನೈನಲ್ಲಿರುವ ಸಂಬಂಧಿಕರು ಪಾಪ ಅಲ್ಲಿ ನೀರಿಲ್ಲ ಎಂದು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಇದರಿಂದ ನಮಗೆ ಇನ್ನಷ್ಟು ಸಮಸ್ಯೆ ಆಗುತ್ತಿದೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳಿದ್ದರೆ ಸಮಸ್ಯೆ ಕೇಳೋದೆ ಬೇಡ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಬೆಂಗಳೂರು ಹಾಗೆ ಅದು ಎಲ್ಲರನ್ನು ಸ್ವಾಗತಿಸುತ್ತದೆ. ಕಾವೇರಿ ಭೇದ- ಭಾವವಿಲ್ಲದೇ ಎಲ್ಲರ ದಾಹ ತಣಿಸುತ್ತಾಳೆ. ಆದರೆ ಈಗ ನಮಗೆ ಕುಡಿಯುವುದಕ್ಕೆ ನೀರಿಲ್ಲ ಏನೂ ಮಾಡೋಣ ಎಂದು ಜನರು ತಮ್ಮ ನೋವು ತೋಡಿಕೊಂಡಿದ್ದಾರೆ.