ಚೆನ್ನೈ: ಎಐಎಡಿಎಂಕೆ ಧ್ವಜಸ್ತಂಭಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಮಹಿಳೆಯ ಬೈಕಿಗೆ ಟ್ರಕ್ವೊಂದು ಡಿಕ್ಕಿ ಹೊಡೆದಿದ್ದು ಈಗ ಮಹಿಳೆಯ ಎಡಗಾಲು ಕತ್ತರಿಸಲಾಗಿದೆ.
ಈ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡ ಮಹಿಳೆಯನ್ನು 30 ವರ್ಷದ ರಾಜೇಶ್ವರಿ ಎಂದು ಗುರುತಿಸಲಾಗಿದೆ. ಈಕೆ ಶುಕ್ರವಾರ ಕೊಯಮತ್ತೂರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ರಸ್ತೆಗೆ ನಿರ್ಮಿಸಲಾಗಿದ್ದ ಎಐಎಡಿಎಂಕೆ ಧ್ವಜಸ್ತಂಭವನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ.
ಬೈಕಿನಲ್ಲಿ ಬರುತ್ತಿದ್ದ ರಾಜೇಶ್ವರಿ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಎಐಎಡಿಎಂಕೆ ಧ್ವಜಸ್ತಂಭವನ್ನು ತಪ್ಪಿಸಲು ಹೋದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ಅವರ ಹಿಂದೆ ಬರುತ್ತಿದ್ದ ಲಾರಿ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಜೇಶ್ವರಿ ಅವರು ಎರಡು ಕಾಲುಗಳಿಗೆ ಗಂಭೀರವಾದ ಗಾಯಗಳಾಗಿತ್ತು. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ಎಡಗಾಲಿಗೆ ಜಾಸ್ತಿ ಪೆಟ್ಟಾಗಿ ಅದು ನುಜ್ಜಾಗಿದೆ. ಆದ್ದರಿಂದ ಅದನ್ನು ಮೊಣಕಾಲಿನಿಂದ ಕೆಳಗೆ ಕತ್ತರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಒಬ್ಬಳೇ ದುಡಿದು ಕುಟುಂಬವನ್ನು ಸಾಕುತ್ತಿದ್ದ ರಾಜೇಶ್ವರಿ ಮೊದಲು ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಹಣದ ಸಮಸ್ಯೆಯ ಕಾರಣಕ್ಕೆ ಕೆಲವು ದಿನದ ಹಿಂದೆ ಕೊಯಮತ್ತೂರಿಗೆ ಬಂದು ಗೋಕುಲಮ್ ಪಾರ್ಕ್ ಎಂಬ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.