– ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
– 4 ವರ್ಷದ ಹಿಂದೆಯೂ ನಡೆದಿತ್ತು ಅವಘಡ
ಮಂಡ್ಯ: ಕಾರ್ಖಾನೆ (Factory) ಸ್ಥಳಾಂತರ ಮಾಡುವಾಗ ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು (Chemical Tank Blast) ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತಿಬ್ಬರು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯದ (Mandya) ಕಾರೆಕಟ್ಟೆ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ನಡೆದಿದೆ.
ಬಸರಾಳು ಸಮೀಪದ ಕಾರೆಕಟ್ಟೆಯಿಂದ (Karekatte) ಬೇರೆ ಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡಲಾಗುತ್ತಿತ್ತು. ಬಿಹಾರ ಮೂಲದ ಕಾರ್ಮಿಕರಿಂದ ಕಾರ್ಖಾನೆ ಸ್ಥಳಾಂತರ ಮಾಡುವ ವೇಳೆ ದುರಂತ ಸಂಭವಿಸಿದೆ. ಕಳೆದ ಒಂದು ತಿಂಗಳಿಂದಲೂ ಸ್ಥಳಾಂತರ ಕೆಲಸ ನಡೆಯುತ್ತಿತ್ತು. ಇಂದು ರಾಸಾಯನಿಕ ಟ್ಯಾಂಕ್ ತೆರವು ಮಾಡುತ್ತಿದ್ದ ವೇಳೆ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಸದ್ಯ ಅಸ್ವಸ್ಥಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸರ್ಕಾರಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ – 2 ಬಸ್, ಆಟೋ ಜಖಂ
ಇದೇ ಕಾರ್ಖಾನೆಯಲ್ಲಿ 4 ವರ್ಷದ ಹಿಂದೆಯೂ ಅವಘಡ ಸಂಭವಿಸಿತ್ತು. ಈ ವೇಳೆ ರಾಸಾಯನಿಕ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು. ಎರಡು ನಾಯಿಗಳು ಮೃತಪಟ್ಟಿದ್ದವು. ಆ ವೇಳೆ ಅದೃಷ್ಟವಶಾತ್ ಜನರ ಪ್ರಾಣ ಹಾನಿಯಾಗಿರಲ್ಲ. ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳೆಗೆ ಮಂಡ್ಯ ಜಿಲ್ಲಾಡಳಿತ ಪರಿಹಾರ ಕೊಡಿಸಿತ್ತು. ಈವರೆಗೆ ಕಾರ್ಖಾನೆ ಆರಂಭವೇ ಆಗಿರಲಿಲ್ಲ. ಹೀಗಾಗಿ ಮಾಲೀಕ ಬೇರೆಕಡೆಗೆ ಕಾರ್ಖಾನೆ ಸ್ಥಳಾಂತರ ಮಾಡಿಸುತ್ತಿದ್ದರು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಮತ್ತೆ ದುರಂತ ಸಂಭವಿಸಿದೆ. ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೆಟ್ರೋ ಸ್ಲ್ಯಾಬ್ ಕುಸಿದು ಓರ್ವ ಸಾವು – ಐವರು ಅರೆಸ್ಟ್, ಗುತ್ತಿಗೆದಾರರಿಗೆ 6 ಕೋಟಿ ದಂಡ

