ತುಮಕೂರು: ಕೋಳಿಫಾರಂನ ಮೇಲೆ ದಾಳಿ ನಡೆಸಿದ ಚಿರತೆಯನ್ನು ಕೂಡಿಹಾಕಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆದಿದೆ.
ತುಂಬಾಡಿ ಗ್ರಾಮದ ಮಾರುತಿ ಎನ್ನುವರಿಗೆ ಸೇರಿದ ಕೋಳಿಫಾರಂನ ಮೇಲೆ ಚಿರತೆ ದಾಳಿ ನಡೆಸಿದೆ. ದಾಳಿ ವೇಳೆ 150ಕ್ಕೂ ಹೆಚ್ಚು ಕೋಳಿಗಳನ್ನು ಚಿರತೆ ತಿಂದು ಹಾಕಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರು ಚಿರತೆಯನ್ನು ಕೋಳಿಫಾರಂನಲ್ಲೇ ಕೂಡಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಆಹಾರ ಅರಸಿ ನಾಡಿಗೆ ಬಂದ ಚಿರತೆಗೆ ಮೃಷ್ಟಾನ್ನಾ ಭೋಜನವೇ ಸಿಕ್ಕಿದ್ದು, ತಪ್ಪಿಸಿಕೊಳ್ಳುವ ಬರದಲ್ಲಿ ಕೋಳಿಫಾರಂನಲ್ಲೇ ಬಂಧಿಯಾಗಿದೆ. ಚಿರತೆ ಹೊರಬರಲು ಹರಸಾಹಸ ಪಡುತ್ತಿದ್ದು, ಗ್ರಾಮಸ್ಥರು ಕೋಳಿಫಾರಂ ಭದ್ರ ಪಡಿಸಿ ಸುತ್ತಾ ಕಾವಲು ಕಾಯುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಚಿರತೆಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದು, ಚಿರತೆಗೆ ಅರವಳಿಕೆ ಮದ್ದು ನೀಡಿ ಹಿಡಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಿಂದ ಅರವಳಿಕೆ ತಜ್ಞರು ಸ್ಥಳಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.