ಬಳ್ಳಾರಿ: ಚಿರತೆಯೊಂದು ರಸ್ತೆ ದಾಟುವಾಗ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಹೊಸಪೇಟೆ ತಾಲೂಕಿನ ತಿಮ್ಮಲಾಪುರದ ರಾಷ್ಟ್ರೀಯ ಹೆದ್ದಾರಿ 13ರ ಬಳಿ ಗುರುವಾರ ರಾತ್ರಿ ನಡೆದಿದೆ.
ತಿಮ್ಮಲಾಪುರ ಬಳಿಯ ಪೋತಲಕಟ್ಟಿ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಆಹಾರವನ್ನರಸಿ ರಸ್ತೆ ದಾಟುವಾಗ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರ್ಎಫ್ಓ ನಾಗರಾಜ್ ಭೇಟಿ ನೀಡಿದ್ರು.
ಇದೇ ವೇಳೇ ಮಾತನಾಡಿದ ಅವರು, ನಿನ್ನೆ ರಾತ್ರಿ ಆಹಾರಕ್ಕೆ ರಸ್ತೆ ದಾಟುವಾಗ ರಸ್ತೆ ದುರಸ್ತಿ ಕಾರ್ಯ ಹಾಗೂ ವಾಹನ ದಟ್ಟಣೆಯಿಂದ ಚಿರತೆ ವಿಚಲಿತಗೊಂಡು ಈ ಅವಘಡ ಸಂಭವಿಸಿರಬಹುದು. ಮರಣೋತ್ತರ ಪರೀಕ್ಷೆಗೆ ಹೊಸಪೇಟೆಗೆ ಸಾಗಿಸಲಾಗುವುದು ಎಂದರು.
ಚಿರತೆಯನ್ನು ನೋಡಲು ಜನಜಂಗುಳಿ ಹೆಚ್ಚಾಗಿ, ಫೋಟೋ ವಿಡಿಯೋ ಮಾಡಲು ಜನ ಮುಗಿಬಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತಂದು ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಹೊಸಪೇಟೆಗೆ ಸಾಗಿಸಿದರು.