ಮಂಡ್ಯ: ಹಲವು ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆಯಾಗಿದೆ.
ಮಂಡ್ಯದ ಪಾಂಡವಪುರದ ಚಿಕ್ಕಾಡೆ ಗ್ರಾಮದಲ್ಲಿ ತಡರಾತ್ರಿ ಚಿರತೆ ಬೋನಿಗೆ ಬಿದ್ದಿದೆ. ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಚಿರತೆ ಕಾಣಿಸಿಕೊಂಡಿತ್ತು.
ಹೀಗಾಗಿ ಚಿಕ್ಕಾಡೆ ಗ್ರಾಮದ ರೈತರು ಆತಂಕದಿಂದ ತಮ್ಮ ಹೊಲಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಗ್ರಾಮದ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ದೂರು ನೀಡಿದ್ದರು.
ದೂರಿನನ್ವಯ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಕುಂತಿ ಬೆಟ್ಟದ ತಪ್ಪಲಿನಲ್ಲಿ ಬೋನೊಂದನ್ನ ಇಟ್ಟಿದ್ದರು. ಆ ಬೋನಿಗೆ ತಡರಾತ್ರಿ ಚಿರತೆ ಸೆರೆಯಾಗಿದೆ. ಸದ್ಯ ಚಿರತೆ ಸೆರೆಯಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಜನರು ಕುತೂಹಲದಿಂದ ಚಿರತೆ ವೀಕ್ಷಿಸುತ್ತಿದ್ದಾರೆ.