ರಾಮನಗರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ರೇಷ್ಮೆ ಸಾಕಾಣಿಕೆ ಕೊಠಡಿಯಲ್ಲಿ ಬಂಧಿಸಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬೇಲಿಕೊತ್ತನೂರು ಗ್ರಾಮದಲ್ಲಿ ನಡೆದಿದೆ.
ಜಗದೀಶ್ ಎಂಬವರಿಗೆ ರೇಷ್ಮೆ ಸಾಕಾಣಿಕೆ ಕೊಠಡಿ ಸೇರಿದೆ. ತಮ್ಮಯ್ಯ ಎಂಬವರು ಕೊಠಡಿಯಲ್ಲಿದ್ದ ಸಂದರ್ಭದಲ್ಲಿ ಚಿರತೆ ಬಂದು ನುಗ್ಗಿ ಎಕಾಏಕಿ ತಮ್ಮಯ್ಯರ ಮೇಲೆ ದಾಳಿ ಮಾಡಿದೆ. ಈ ವೇಳೆ ಅಲ್ಲೇ ಇದ್ದ ಜಗದೀಶ್ ತಿಮ್ಮಯ್ಯರನ್ನು ಚಿರತೆಯಿಂದ ಪಾರು ಮಾಡಿದ್ದಾರೆ. ಅಲ್ಲದೇ ಚಿರತೆ ಹೊರಬಾರದಂತೆ ಕೊಠಡಿ ಲಾಕ್ ಮಾಡಿದ್ದಾರೆ.
ಹೀಗೆ ಕೂಡಿ ಹಾಕಿದ ಚಿರತೆಯನ್ನು ನೋಡಲು ಸಾಗರ್ ಎಂಬ ಯುವಕ ಕಿಟಕಿ ಮೂಲಕ ನೋಡಲು ಮುಂದಾದರು. ಈ ವೇಳೆ ಚಿರತೆ ಸಾಗರ್ ಮೇಲೂ ದಾಳಿ ನಡೆಸಿದೆ. ಸದ್ಯ ಗಾಯಾಳುಗಳನ್ನು ಕನಕಪುರ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸದ್ಯ ಚಿರತೆಯನ್ನು ಸೆರೆ ಹಿಡಿಯಲು ಸ್ಥಳಕ್ಕೆ ಬನ್ನೇರುಘಟ್ಟ ಅಧಿಕಾರಿಗಳು ಭೇಟಿ ನೀಡಿ, ಕಾರ್ಯಚರಣೆ ನಡೆಸಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನವನದ ವೈದ್ಯ ಉಮಾಶಂಕರ್ ತಂಡ ಭೇಟಿ ನೀಡಿ ವೈದ್ಯರು ಚಿರತೆಗೆ ಅರವಳಿಕೆ ನೀಡಿದ್ದಾರೆ.