ಮಂಡ್ಯ: ವೈದ್ಯರೊಬ್ಬರ ತೋಟದ ಮನೆಗೆ ನುಗ್ಗಿ ಎರಡು ಬಾರಿ ಉಪಟಳ ಕೊಟ್ಟು ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಇಂದು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆಹಿಡಿಸಿದ್ದಾರೆ.
ಬಹುದಿನಗಳಿಂದ ಜಿಲ್ಲೆಯ ಮಳವಳ್ಳಿ, ಹಲಗೂರು ಹೋಬಳಿಯ ಅಂತರವಳ್ಳಿ ಗ್ರಾಮದಲ್ಲಿ ಚಿರತೆಯೊಂದರ ಹಾವಳಿ ಹೆಚ್ಚಾಗಿತ್ತು. ಅಂತರವಳ್ಳಿ ಗ್ರಾಮದ ನಿವಾಸಿ ಡಾ. ನಾಗೇಶ್ ಅವರ ತೋಟದ ಮನೆಗೆ ಎರಡು ಬಾರಿ ನುಗ್ಗಿ ಚಿರತೆ ನಾಯಿಯನ್ನು ಕೊಂದು ತಿಂದಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ವೈದ್ಯರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ನಾಗೇಶ್ ಅವರ ಮನವಿಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅವರ ತೋಟದಲ್ಲಿ ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು. ಇಂದು ಬೆಳಗ್ಗೆ ತೋಟದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಇಷ್ಟುದಿನ ಉಪಟಳ ಕೊಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತಲ್ಲ ಅಂತ ವೈದ್ಯರು ಹಾಗೂ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಚಿರತೆ ಸೆರೆಯಾಗಿರುವ ಬಗ್ಗೆ ಮಾಹಿತಿ ದೊರಕಿದ ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಯನ್ನು ನೋಡಲು ಸ್ಥಳೀಯರು ಮುಗಿಬಿದ್ದು ತೋಟದತ್ತ ಬರುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv