– ರಾಮನ ಅವಮಾನಿಸಿದ ಶಿಕ್ಷಕಿ ಮೇಲೆ ಏಕೆ FIR ಹಾಕಿಲ್ಲ – ಭರತ್ ಶೆಟ್ಟಿ ಪ್ರಶ್ನೆ
ಬೆಂಗಳೂರು: ಮಂಗಳೂರಿನ ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಭರತ್ ಶೆಟ್ಟಿ (Bharat Shetty) ವಿರುದ್ಧ ಪ್ರಕರಣ ದಾಖಲಿಸಿದ ಇನ್ಸ್ಪೆಕ್ಟರ್ ಫೋನ್ಕಾಲ್ ಡಿಟೇಲ್ಸ್ ಪರಿಶೀಲನೆ ನಡೆಸುವಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashoka) ಸದನದಲ್ಲಿ ಒತ್ತಾಯಿಸಿದರು.
ಮಂಗಳೂರಿನಲ್ಲಿ (Mangaluru) ಪ್ರೌಢಶಾಲೆ ಮುಂದೆ ನಿಂತು ಜೈಶ್ರೀರಾಮ್ ಘೋಷಣೆ ಕೂಗಿ, ಕ್ರೈಸ್ತ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಶಾಸಕ ಭರತ್ ಶೆಟ್ಟಿ ಪ್ರಸ್ತಾಪಿಸಿದರು.
ಈ ವೇಳೆ ಆರ್.ಅಶೋಕ್ ಮಾತನಾಡಿ, ಭರತ್ ಶೆಟ್ಟಿ ಸ್ಥಳದಲ್ಲೇ ಇರಲಿಲ್ಲ ಅಂದ್ಮೇಲೆ ಕೇಸ್ ಹೇಗೆ ಹಾಕ್ತಾರೆ? ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ, ಯಾರ ಚಿತಾವಣೆಯಿಂದ ಕೇಸ್ ಹಾಕಿದ್ದಾರೆ? ಆ ಇನ್ಸ್ಪೆಕ್ಟರ್ನ (Police Inspector) ಅಮಾನತು ಮಾಡಿ, ಅವರ ಫೋನ್ ಕಾಲ್ ಡಿಟೇಲ್ಸ್ ತೆಗೆಯಿರಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕ್ರಿಶ್ಚಿಯನ್ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಭರತ್ ಶೆಟ್ಟಿ, ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ, ವೇದವ್ಯಾಸ ಕಾಮತ್ ಮೇಲೆ ಎಫ್ಐಐಆರ್ ಹಾಕಿದ್ದಾರೆ. ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕಿ 7ನೇ ತರಗತಿ ಮಕ್ಕಳಿಗೆ ಪಾಠ ಮಾಡುವಾಗ ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಅಂತಾ ಪೋಷಕರು ಆರೋಪಿಸಿದ್ರು. ಆಗ ನಾನು ಡಿಡಿಪಿಐಗೆ ವಿಚಾರಣೆ ಮಾಡುವಂತೆ ಆಗ್ರಹಿಸಿದೆ. ಅಲ್ಲಿಂದ ನಾನು ಏರ್ಪೋರ್ಟ್ಗೆ ಹೋದರೆ ನಂತರ ವೇದವ್ಯಾಸ ಕಾಮತ್ ಶಾಲೆಯ ಬಳಿಗೆ ಪೋಷಕರ ಜೊತೆ ಹೋಗಿದ್ರು, ಅಲ್ಲಿ ಪ್ರತಿಭಟನೆ ನಡೆದಿದೆ. ಬಳಿಕ ಅಲ್ಲಿ ಶಿಕ್ಷಕಿಯನ್ನ ಅಮಾನತು ಮಾಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ನಾನು ಶಾಲೆ ಬಳಿ ಇರಲೇ ಇಲ್ಲ, ಆದ್ರೂ ನನ್ನ ಮೇಲೆ ಎಫ್ಐಆರ್ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ
ವೆಲೆನ್ಸಿಯಾ ಸೇಂಟ್ ಜೆರೋಸಾ ಪ್ರೌಢಶಾಲೆಯ ಶಿಕ್ಷಕಿ ಮೇಲೆ ಎಫ್ಐಆರ್ ಏಕೆ ಹಾಕಿಲ್ಲ, ನಮ್ಮ ಮೇಲೆ ಮಾತ್ರ ಏಕೆ ಎಫ್ಐಆರ್ ಆಗಿದೆ. ಅದು ಜಾಮೀನು ರಹಿತ ವಾರಂಟ್ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಕಾಂಗ್ರೆಸ್ ಶಾಸಕರು ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಚಿವ ದಿನೇಶ್ ಗುಂಡೂರಾವ್, ಮಂಗಳೂರಲ್ಲಿ ಹೇಗೆ ಪ್ರಚೋದನೆ ಮಾಡಿಸ್ತಿದ್ದಾರೆ ಅಂತ ಗೊತ್ತಿದೆ. ದೂರು ಕೊಟ್ಟಿದ್ದಕ್ಕೆ ಎಫ್ಐಆರ್ ಆಗಿದೆ ಅದರಲ್ಲೇನು ಎಂದು ಕುಟುಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಅಧಿವೇಶನಕ್ಕೆ ಬಂದಂತಹ ಶಾಸಕರ ಮೇಲೆ ಎಫ್ಐಆರ್ ಹಾಕ್ತಾರೆ ಅಂದರೆ ಹೇಗೆ? ಯಾರೋ ದೂರು ಕೊಟ್ಟರೆ ಶಾಸಕರು ಅಧಿವೇಶನದಲ್ಲಿ ಇದ್ದಾಗ ಎಫ್ಐಆರ್ ಹೇಗೆ ಹಾಕ್ತಾರೆ? ಶಾಸಕರ ರಕ್ಷಣೆಗೆ ನೀವು ಬರಬೇಕು ಎಂದು ಸ್ಪೀಕರ್ಗೆ ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್ನಿಂದ 4 ಮಂದಿ ಕಾಂಗ್ರೆಸ್ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ