ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಸ್ತಬ್ಧವಾಗಿದ್ದ ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಕಾರು, ಬೈಕ್, ಅಂಬುಲೆನ್ಸ್, ಮಿನಿ ಬಸ್ ಸೇರಿದಂತೆ ಸಣ್ಣ ವಾಹನಗಳ ಸಂಚಾರವು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಲಿದೆ. ರಾತ್ರಿ ವೇಳೆ ಸಂಚಾರಕ್ಕೆ ತಡೆ ನೀಡಿರುವ ಜಿಲ್ಲಾಡಳಿತವು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಿದೆ. ಆದರೆ ಸರ್ಕಾರಿ ಬಸ್ ಸೇರಿದಂತೆ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಧಾರಾಕಾರ ಮಳೆಯಾಗಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಕುಸಿತ ಕಂಡಿರುವುದರಿಂದ ಸಂಚಾರ ಸ್ಥಗಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದರು. ಇದರಿಂದಾಗಿ ಘಾಟ್ ಮಾರ್ಗದ ಚಿಕ್ಕಮಗಳೂರು – ದಕ್ಷಿಣ ಕನ್ನಡ, ಧರ್ಮಸ್ಥಳ ಸಂಪರ್ಕ ಕಡಿತವಾಗಿತ್ತು. ಸದ್ಯ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ.
ಚಾರ್ಮಾಡಿ ಘಾಟ್ ವಾಹನ ಸಂಚಾರವನ್ನು ಚಿಕ್ಕಮಗಳೂರು ಜಿಲ್ಲಾಡಳಿತವು ಸೆಪ್ಟೆಂಬರ್ 14ರ ವರೆಗೆ ನಿಷೇಧಿಸಿತ್ತು. ಆದರೆ ಪ್ರಯಾಣಿಕರ ಸಮಸ್ಯೆ ಅರಿತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಲಘು ವಾಹನಗಳಿಗೆ ಅವಕಾಶ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.