ಕೆಜಿಎಫ್ 2 ಸಿನಿಮಾದ ನಂತರ ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ಸದ್ದು ಮಾಡಿದ ಚಿತ್ರ ಚಾರ್ಲಿ 777. ಬಾಕ್ಸ್ ಆಫೀಸಿನಲ್ಲಿ ಅದು ಸಖತ್ ಕಮಾಯಿ ಮಾಡಿತು. ಚೊಚ್ಚಲು ಸಿನಿಮಾದ ಮೂಲಕ ನಿರ್ದೇಶಕ ಕಿರಣ್ ರಾಜ್, ಭಾರತೀಯ ಸಿನಿಮಾ ರಂಗಕ್ಕೆ ಪರಿಚಯವಾದರು. ಕಿರಣ್ ರಾಜ್ ಗೆ ಇದೀಗ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ಇವರ ಹೆಸರನ್ನು ದುರುಪಯೋಗ ಪಡಿಸಿಕೊಂಡ ಘಟನೆ ನಡೆದಿದೆ. ನಕಲಿ ನಿರ್ದೇಶಕನೊಬ್ಬ ಕಿರಣ್ ರಾಜ್ ಹೆಸರನ್ನು ಬಳಸಿಕೊಂಡು, ಮಲಯಾಳಂ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿದ್ದಾನೆ.
ಮಲಯಾಳಂ ಖ್ಯಾತ ನಟಿ ಮಾಲಾ ಪಾರ್ವತಿಗೆ ಕರೆ ಮಾಡಿರುವ ನಕಲಿ ನಿರ್ದೇಶಕ, ತಾನು ಚಾರ್ಲಿ ಸಿನಿಮಾದ ಡೈರೆಕ್ಟರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ತನ್ನ ಮುಂದಿನ ಚಿತ್ರಕ್ಕೆ ತಮ್ಮ ಡೇಟ್ ಬೇಕಾಗಿತ್ತು ಎಂದು ಕೇಳಿದ್ದಾನೆ. ನಾಲ್ಕೈದು ಬಾರಿ ಕರೆ ಮಾಡಿದಾಗ ಮಾಲಾಗೆ ಅನುಮಾನ ಬಂದು, ತಮಗೆ ಪರಿಚಿತ ಚಾರ್ಲಿ ಸಿನಿಮಾದ ತಂತ್ರಜ್ಞರೊಬ್ಬರಿಗೆ ಕರೆ ಮಾಡಿದ್ದಾರೆ. ಅವರು ಕಿರಣ್ ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ವತಃ ಅಚ್ಚರಿಗೊಂಡಿದ್ದಾರೆ ಕಿರಣ್. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್
ಆ ನಕಲಿ ಡೈರೆಕ್ಟರ್ ನನ್ನು ಕಂಡು ಹಿಡಿಯಬೇಕು ಎಂದು ಮಾಲಾ ಅವರಿಗೆ, ನಕಲಿ ಡೈರೆಕ್ಟರ್ ಜೊತೆ ಕಾನ್ಫರೆನ್ಸ್ ಕಾಲ್ ಹಾಕಲು ಹೇಳಿದ್ದಾರೆ. ಮಾಲಾ ಅದೇ ರೀತಿ ಮಾಡಿದಾಗ ನಕಲಿ ಡೈರೆಕ್ಟರ್ ಬಣ್ಣ ಬಯಲಾಗಿದೆ. ಕೂಡಲೇ ಅವರು ಆ ವ್ಯಕ್ತಿಯ ಮೇಲೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಅಲ್ಲದೇ, ಈ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ವ್ಯಕ್ತಿಗಳಿಂದ ದೂರವಿರಿ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿರಣ್ ರಾಜ್, ನಾನೆಂದೂ ಆ ರೀತಿ ಕೆಲಸ ಮಾಡುವವನು ಅಲ್ಲ. ಹಾಗಾಗಿ ನನ್ನ ಹೆಸರಿನಲ್ಲಿ ಈ ರೀತಿ ಕೆಲಸ ನಡೆದಿದೆ ಎಂದಾಗ ಶಾಕ್ ಆದೆ. ಆ ವ್ಯಕ್ತಿಗೆ ಪಾಠ ಕಲಿಸಲೇಬೇಕು ಎಂದು ಮಾಲಾ ಅವರಿಗೆ ತಿಳಿಸಿದೆ. ಅವರು ಕೂಡ ನಾನು ಹೇಳಿದಂತೆ ಮಾಡಿದರು. ಕೊನೆಗೂ ಆ ನಕಲಿ ಡೈರೆಕ್ಟರ್ ನನ್ನು ಕಂಡು ಹಿಡಿದೆವು. ಆದರೆ, ಈ ಘಟನೆ ನಂತರ ಅವನು ಮೊಬೈಲ್ ಆಫ್ ಮಾಡಿಕೊಂಡಿದ್ದಾನೆ ಎನ್ನುತ್ತಾರೆ ಕಿರಣ್.