ನವದೆಹಲಿ: ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ 30 ಬಿಜೆಪಿ ಕಾರ್ಯಕರ್ತರ ವಿರುದ್ಧ ದೆಹಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಸಿರುವ ಪೊಲೀಸರು ಗುಂಪು ಕಟ್ಟಿಕೊಂಡು ಸಾರ್ವಜನಿಕ ಆಸ್ತಿ-ಪಾಸ್ತಿ ನಾಶ ಮಾಡಿರುವ ಆರೋಪ ಹೊರಿಸಲಾಗಿದೆ.
ಚಾರ್ಜ್ಶೀಟ್ ನಲ್ಲಿ ಹಲವು ಐಪಿಸಿ ಸೆಕ್ಷನ್ ಗಳನ್ನು ಉಲ್ಲೇಖಿಸಲಾಗಿದೆ. ಪ್ರತಿಭಟನೆ ಹೆಸರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಅಕ್ರಮ ಪ್ರವೇಶಕ್ಕೆ ಪ್ರಯತ್ನಪಡಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲಾಗಿದೆ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿರುವುದು ಸೇರಿ ಕಾನೂನು ಸುವ್ಯವಸ್ಥೆ ಹಾಳುಗೆಡವಿದ ಆರೋಪಗಳನ್ನು ಮಾಡಲಾಗಿದೆ. ಇದನ್ನೂ ಓದಿ: ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಸ್ಫೋಟ – ಗ್ರಾಮಸ್ಥರಲ್ಲಿ ಆತಂಕ
ಅಲ್ಲದೇ ಪ್ರತಿಭಟನಾಕಾರರು ಒಂದು ಹಂತ ಅಲ್ಲದೇ, ಮೂರು ವಿಭಿನ್ನ ಭದ್ರತಾ ಪದರಗಳಲ್ಲಿ ಪೊಲೀಸರ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ. ಸಿಎಂ ಮನೆಯಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ ನಿರ್ದೇಶನಗಳನ್ನು ಪ್ರತಿಭಟನಾಕಾರರು ಉಲ್ಲಂಘಿಸಿದ್ದಾರೆ ಎಂದು ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಕಾಶ್ಮೀರಿ ಫೈಲ್ಸ್ ಸಿನಿಮಾಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ ಹೇಳಿಕೆಯನ್ನು ಖಂಡಿಸಿ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ನಿವಾಸದೊಳಗೆ ಅಕ್ರಮ ಪ್ರವೇಶಕ್ಕೆ ಪ್ರಯತ್ನಪಟ್ಟ ಪ್ರತಿಭಟನಾಕಾರರು ಬ್ಯಾರಿಕೇಡ್ ಕೆಡವಿ ಗಲಭೆ ಎಬ್ಬಿಸಿದ್ದರು.