ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಅಪರಿಚಿತ ಬ್ಯಾಗ್ನಲ್ಲಿ ಸಿಕ್ಕಿದ ನಾಡ ಪಿಸ್ತೂಲ್ ಮತ್ತು ಚಾಕು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದು, ಇಬ್ಬರು ಕೊಲೆ ಆರೋಪಿಗಳು ಸೆರೆಯಾಗಿದ್ದಾರೆ.
ಇಂದು ಬೆಳಗ್ಗೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಬ್ಯಾಗ್ ಸಿಕ್ಕಿದ್ದು, ಅದರಲ್ಲಿ ಗನ್ ಇರುವ ವಿಷ್ಯ ತಿಳಿದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. ಬಸ್ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದ ರಾಜಸ್ಥಾನ ಮೂಲದ ಕಿಶನ್ ಮತ್ತು ಮನಿಷ್ ಬಂಧಿತ ಆರೋಪಿಗಳಾಗಿದ್ದಾರೆ. ಬ್ಯಾಗ್ನಲ್ಲಿ ದೇಶಿ ನಿರ್ಮಿತ ಗನ್, ಚಾಕು ಹಾಗೂ ಖಾರದ ಪುಡಿ ಹಾಗೂ ಬಟ್ಟೆ ಪತ್ತೆಯಾಗಿತ್ತು.
ಬಸ್ ನಿಲ್ದಾಣದಲ್ಲಿ ಬಿಟ್ಟು ತೆರಳಿದ್ದ ಬ್ಯಾಗ್ ವಾಪಸ್ ಪಡೆಯಲು ಬಂದಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಅವರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಕೊಲೆ ರಹಸ್ಯ ತಿಳಿದು ಬಂದಿದೆ. ಆರೋಪಿಗಳು ಮಂಡ್ಯದಲ್ಲಿ ಗೂಡರಾಮ್ ಎಂಬುವವರನ್ನು ಕೊಲೆ ಮಾಡಿ, ಬ್ಯಾಗ್ ಸಮೇತ ಪರಾರಿಯಾಗುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣದಲ್ಲಿ ಬಸ್ನಲ್ಲೇ ಬ್ಯಾಗ್ ಬಿಟ್ಟು ತೆರಳಿದ್ದರು. ಅನುಮಾನಸ್ಪದ ಬ್ಯಾಗ್ ನೋಡಿದ್ದ ಕೆಎಸ್ಆರ್ ಟಿಸಿ ಸಿಬ್ಬಂದಿ ಚನ್ನರಾಯಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬ್ಯಾಗ್ ಮರಳಿ ಪಡೆಯಲು ಆರೋಪಿಗಳು ಬಂದಾಗ ಉಪಾಯವಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.