– ಅಹರ್ನ ಶಾಸಕರಿಗೆ ಶಿಕ್ಷೆ ಫಿಕ್ಸ್
ಹಾಸನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಜ್ಜನರ ಸಹವಾಸ ಮಾಡಲಿ ಎಂದು ರಾಜಗುರು ದ್ವಾರಕಾನಾಥ್ ಸಲಹೆ ನೀಡಿದ್ದಾರೆ.
ಹುಟ್ಟೂರು ರಾಮನಗರ ಜಿಲ್ಲೆಯ ಚನ್ನರಾಯಪಟ್ಟಣದ ಅಣತಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಮನೆ ಬಾಗಿಲು ತೆರೆದಿದೆ. ಅವರಿಗೆ ಈಗ ಎದುರಾಗಿರುವುದು ಕಂಟಂಕ ಅಲ್ಲ. ರಾಮ ವನವಾಸ ಮುಗಿಸಿದ ಮೇಲೆ ಅಯೋಧ್ಯೆಗೆ ಬಂದು ಕೂರಲಿಲ್ಲವೆ? ಅಂತೆ ಡಿ.ಕೆ.ಶಿವಕುಮಾರ್ ಅವರು ಹೊರ ಬಂದಿದ್ದಾರೆ. ಇನ್ನು ಮುಂದೆ ಸಜ್ಜನರ ಸಹವಾಸ ಮಾಡಲಿ ಎಂದು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಇಲ್ಲಿವರೆಗೂ ನನ್ನ ಬಳಿ ಬಂದಿಲ್ಲ. ಅವರು ಅಲ್ಲೆಲ್ಲೋ ಹೋಗಿದ್ದಾರೆ ಎನ್ನುತ್ತಾರೆ. ನಾನು ಅವರನ್ನ ಸಂಪರ್ಕಿಸಿಲ್ಲ. ಅವರೊಂದಿಗೆ ಯಾರೂ ಇಲ್ಲದಿದ್ದಾಗ ನಾನಿದ್ದೆ. ಅವರ ಜೀವನದಲ್ಲಿ ಮೊದಲು ಬಂದವನು ನಾನು. ಬಂಗಾರಪ್ಪ ಮಂತ್ರಿಮಂಡಲದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವರಾಗಿ ಮಾಡಿದ್ದೆ. ಮಾಜಿ ಸಚಿವರ ಜೀವನದಲ್ಲಿ ನನ್ನ ಪಾತ್ರ ಬಹಳ ಇದೆ. ನಮ್ಮ ಮನೆಗೆ ಬರುವರೆಲ್ಲಾ ದೇವರೆ. ಡಿ.ಕೆ.ಶಿವಕುಮಾರ್ ಗಂಧದ ಜೊತೆಗೆ ಗುದ್ದಾಡಲಿ. ಉತ್ತಮರೊಂದಿಗೆ ಹೋರಾಡಲಿ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಆಘಾತ ಕಾದಿದೆ. ಅನರ್ಹ ಶಾಸಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ತಂದೆ-ತಾಯಿ ಬೈದರೆಂದು ಮನೆ ಬಿಟ್ಟು ಹೋಗಲು ಸಾಧ್ಯವೆ? ಪಕ್ಷ ತಾಯಿ ಸಮಾನ. ಸರಿ ಹೊಂದದೆ ಇದ್ದರೆ ಗೆದ್ದ ಪಕ್ಷದಿಂದ ಐದು ವರ್ಷ ಪೂರೈಸಿ ಬಿಡಬೇಕು. ಹೀಗೆ ಮಧ್ಯದಲ್ಲಿ ಪಕ್ಷ ಬಿಟ್ಟು ಹೋದರೆ ಸಾರ್ವಜನಿಕರ ಸಮಯ, ಹಣ ವ್ಯರ್ಥವಾಗುತ್ತದೆ ಎಂದು ಅನರ್ಹ ಶಾಸಕರ ವಿಚಾರದಲ್ಲಿ ಮಾರ್ಮಿಕವಾಗಿ ಭವಿಷ್ಯ ನುಡಿದರು.
ನವೆಂಬರ್ 4ರಂದು ಗುರು ಮುಂದೆ ಚಲಿಸಿದ್ದಾನೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾರ್ಚ್ ವರೆಗೆ ಆಘಾತಗಳಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಷಾರಾಗಿ ಸರ್ಕಾರ ನಡೆಸಬೇಕು ಎಂದು ತಿಳಿಸಿದರು.