ದಾವಣಗೆರೆ: ಚನ್ನಗಿರಿ (Channagiri Violence) ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಿಂದ ಹೊನ್ನೆಬಾಗಿ ಗ್ರಾಮದಲ್ಲಿ ಬಹುತೇಕ ಜನರು ಮನೆ ಖಾಲಿ ಮಾಡಿದ್ದಾರೆ.
ಈಗಾಗಲೇ 39 ಜನರನ್ನು ಬಂಧನ (Arrest) ಮಾಡಿದ ಬೆನ್ನಲ್ಲೇ ಮತ್ತಷ್ಟು ಜನರನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ತನ್ನನ್ನು ಬಂಧಿಸಬಹುದು ಎಂಬ ಭೀತಿಯಿಂದ ಕೆಲ ಪುರುಷರು ಗ್ರಾಮವನ್ನೇ ಬಿಟ್ಟು ಹೋಗಿದ್ದಾರೆ. ಕೆಲ ಮನೆಗಳಿಗ ಬೀಗ ಬಿದ್ದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಗೋಲ್ಮಾಲ್ – ಏನಿದು ಹಗರಣ? ಅಕ್ರಮ ಹಣ ವರ್ಗಾವಣೆ ಆಗಿದ್ದು ಯಾಕೆ?
ಮಾವಿನ ಹಣ್ಣು ವ್ಯಾಪಾರಕ್ಕೆ ತುಮಕೂರಿನ ಗುಬ್ಬಿಗೆ ಹೋಗಿದ್ದ ಸೈಯ್ಯದ್ ತನ್ವೀರ್ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಗಲಾಟೆಗೂ ಆತನಿಗೂ ಸಂಬಂಧ ಇಲ್ಲದಿದ್ದರೂ ಕೂಡ ಬಂಧನ ಮಾಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಸೈಯ್ಯದ್ ತನ್ವೀರ್ನ ಒಂದೂವರೆ ವರ್ಷದ ಪುತ್ರನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಇನ್ನು ಎರಡು ದಿನಗಳಲ್ಲಿ ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಬೇಕಿದೆ. ಆದರೆ ತಂದೆ ಜೈಲು ಸೇರಿದ ಹಿನ್ನಲೆ ಕುಟುಂಬಸ್ಥರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಕಲ್ಲು ಹೊಡೆದವರನ್ನು ಬಿಟ್ಟು ಕಷ್ಟ ಪಟ್ಟು ದುಡಿಯುತ್ತಿರುವರನ್ನು ಬಂಧನ ಮಾಡಿದ್ದಾರೆ. ದಾಂಧಲೆ ಮಾಡಿದ ಕಿಡಿಗೇಡಿಗಳನ್ನು ಬಂಧನ ಮಾಡಿ, ಆದರೆ ಅಮಾಯಕರಿಗೆ ಕಿರುಕುಳ ನೀಡಿಬೇಡಿ ಎಂದು ಬಂಧನಕ್ಕೆ ಒಳಗಾದ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.