ನವದೆಹಲಿ: ನೀವು ಬದಲಾಗಿ, ಇಲ್ಲದಿದ್ದರೆ ಎಲ್ಲವೂ ಬದಲಾವಣೆ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರು ಸಂಸತ್ತಿಗೆ ಗೈರುಹಾಜರಾಗುತ್ತಿರುವ ವಿಚಾರ ಪ್ರಸ್ತಾಪಿಸಿ ಮಾತನಾಡಿದರು.
ಸಂಸತ್ತಿನಲ್ಲಿ ಸರಿಯಾಗಿ ಹಾಜರಾಗಬೇಕು ಎಂದು ಪದೇ ಪದೇ ಒತ್ತು ನೀಡುತ್ತಿದ್ದ ಮೋದಿ ಅವರು, ದಯವಿಟ್ಟು ಸಂಸತ್ತು ಮತ್ತು ಸಭೆಗಳಲ್ಲಿ ನಿಯಮಿತವಾಗಿ ಹಾಜರಾಗುವುದನ್ನು ರೂಢಿಸಿಕೊಳ್ಳಿ. ಈ ಬಗ್ಗೆ ನಿಮಗೆ ಮತ್ತೆ ಮತ್ತೆ ಮಕ್ಕಳಿಗೆ ಹೇಳಿದಂತೆ ಹೇಳುವುದು ನನಗೆ ಸರಿ ಎನಿಸುವುದಿಲ್ಲ. ನಿಮ್ಮನ್ನು ನೀವು ಬದಲಾಯಿಸಿಕೊಳ್ಳದಿದ್ದರೆ, ಕಾಲಕ್ರಮೇಣ ಎಲ್ಲವೂ ಬದಲಾವಣೆಗಳಾಗುತ್ತವೆ ಎಂದು ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
ಈ ವೇಳೆ ಅಮಿತ್ ಶಾ, ಪಿಯೂಷ್ ಗೋಯಲ್, ಎಸ್ ಜೈಶಂಕರ್, ಪ್ರಹ್ಲಾದ್ ಜೋಶಿ, ಜಿತೇಂದ್ರ ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಉಪಸ್ಥಿತರಿದ್ದರು. ಪ್ರಸ್ತುತ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನವೆಂಬರ್ 29 ರಂದು ಆರಂಭವಾಗಿದ್ದು, ಡಿಸೆಂಬರ್ 23 ರವರೆಗೆ ನಡೆಯಲಿದೆ.
ಇತ್ತೀಚೆಗೆ ನಾಗಾಲ್ಯಾಂಡ್ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ 14 ನಾಗರಿಕರು ಸಾವನ್ನಪ್ಪಿದ ವಿಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಬಿಜೆಪಿಯು ಪ್ರತಿಪಕ್ಷಗಳ ಆಕ್ರೋಶವನ್ನು ಎದುರಿಸುತ್ತಿದೆ. ಈ ಹಿನ್ನೆಲೆ ಮೋದಿ ಅವರು ತಮ್ಮ ಪಕ್ಷದಲ್ಲಿ ಶಿಸ್ತನ್ನು ನಿರೀಕ್ಷಿಸುತ್ತಿದ್ದು ಎಲ್ಲರಿಗೂ ಎಚ್ಚರಿಕೆಯನ್ನು ನೀಡಿದರು.