-ನಾಲ್ಕನೇ ಬಾರಿ ಉಸ್ತುವಾರಿ ಬದಲಾವಣೆ
ರಾಯಚೂರು: ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ನಾಲ್ಕನೇ ಬಾರಿಗೆ ಉಸ್ತುವಾರಿ ಬದಲಾವಣೆಯಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರಿಗೆ ಇದೀಗ ಉಸ್ತುವಾರಿ ಕೊಡಲಾಗಿದೆ.
ಸಚಿವ ವಿ.ಸೋಮಣ್ಣ ಅವರಿಗಿದ್ದ ಜವಾಬ್ದಾರಿಯನ್ನು ಹಾಲಪ್ಪ ಆಚಾರ್ಗೆ ವಹಿಸಲಾಗಿದೆ. ಕೊಪ್ಪಳ ಜಿಲ್ಲೆಯ ಜೊತೆಗೆ ರಾಯಚೂರು ಜಿಲ್ಲೆಯ ಉಸ್ತುವಾರಿಯನ್ನೂ ನಿರ್ವಹಿಸಲು ಸರ್ಕಾರ ಸೂಚಿಸಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉಸ್ತುವಾರಿ ಬದಲಾವಣೆಯ ತಿದ್ದುಪಡಿ ಆದೇಶವನ್ನು ಹೊರಡಿಸಿದ್ದಾರೆ. ಪದೇ ಪದೇ ಉಸ್ತುವಾರಿ ಸಚಿವರು ಬದಲಾವಣೆಯಾಗುತ್ತಿರುವುದರಿಂದ ರಾಯಚೂರು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೇಶ-ಧರ್ಮದ ವಿಚಾರದಲ್ಲಿ ನಾನು ಸದಾ ಧ್ವನಿ ಎತ್ತುತ್ತೇನೆ: ಪ್ರತಾಪ್ ಸಿಂಹ
ಜಿಲ್ಲೆಗೆ ನೇಮಕವಾಗುವ ಉಸ್ತುವಾರಿ ಸಚಿವರು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗುತ್ತಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದು, ಒಂದು ಸಭೆ ಬಳಿಕ ಸಚಿವರೇ ಬದಲಾಗಿರುತ್ತಾರೆ, ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶ್ರೀರಾಮುಲು, ನಂತರ ಲಕ್ಷ್ಮಣ ಸವದಿ ಸಿಎಂ ಬದಲಾವಣೆ ಬಳಿಕ ವಿ. ಸೋಮಣ್ಣ ಈಗ ನಾಲ್ಕನೇಯವರಾಗಿ ಹಾಲಪ್ಪ ಆಚಾರ್ಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಪ್ರತೀ ಬಾರಿಯೂ ಹೊರಜಿಲ್ಲೆಯವರಿಗೆ ಉಸ್ತುವಾರಿ ಸ್ಥಾನ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯನ್ನು ಕಡೆಗಣಿಸಿದಂತಾಗಿದ್ದು, ಸ್ಥಳೀಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ Vs ಪ್ರೀತಂ ಗೌಡ – ಫೋಟೋ ಪಾಲಿಟಿಕ್ಸ್ ಜಟಾಪಟಿ ತಾರಕಕ್ಕೆ