ನವದೆಹಲಿ: ಚಂದ್ರಯಾನ-2 ಉಡಾವಣೆಯನ್ನು ಯಶಸ್ವಿಗೊಳಿಸುವಲ್ಲಿ ವರ್ಷಗಳಿಂದ ಹಲವಾರು ಪುರುಷರು ಹಾಗೂ ಮಹಿಳೆಯರ ತಂಡ ಕೆಲಸ ಮಾಡಿದೆ. ಆದರೆ, ಈ ಬಾರಿಯ ಚಂದ್ರಯಾನದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವನಿರ್ವಹಿಸಿದ್ದು ಅದರಲ್ಲೂ ಇಬ್ಬರು ಪ್ರಮುಖ ಪಾತ್ರವಹಿಸಿದ್ದಾರೆ.
ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಕೆಲಸ ಮಾಡಿದ್ದರೆ ಚಂದ್ರನಲ್ಲಿ ಉಪಗ್ರಹ ಇಳಿಯಬೇಕಾದ ಸ್ಥಳವನ್ನು ಗುರುತಿಸುವಲ್ಲಿ ಮಿಷನ್ ನಿರ್ದೇಶಕಿ ರಿತು ಕರಿಧಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಶೇಷವೆಂದರೆ ಉಪಗ್ರಹದ ಬಾಹ್ಯ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಚಂದ್ರಯಾನ-2ರ ಮಿಷನ್ ಡೈರೆಕ್ಟರ್ ರಿತು ಕರಿಧಾಲ್ ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್(ಐಐಎಸ್ಸಿ)ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮಂಗಳಯಾನದ ಉಪ ಕಾರ್ಯಾಚಣೆ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವ ಕರಿಧಾಲ್ ಅವರಿಗಿದ್ದು ಭಾರತದ ‘ರಾಕೆಟ್ ಮಹಿಳೆ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಚಂದ್ರಯಾನ-2ರ ಯೋಜನಾ ನಿರ್ದೇಶಕಿ ಮುತ್ತಯ್ಯ ವನಿತಾ ಅವರು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಇಂಜಿನಿಯರ್ ಆಗಿದ್ದು, ಉಪಗ್ರಹಗಳಿಗೆ ಡೇಟಾ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಹೀಗಾಗಿ ಇವರನ್ನು ಯೋಜನಾ ನಿರ್ದೇಶಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆರಂಭದಲ್ಲಿ ವನಿತಾ ಅವರು ಜವಾಬ್ದಾರಿಯನ್ನು ಹೊರಲು ಮುಂದಾಗಿರಲಿಲ್ಲ. ಆದರೆ, ಚಂದ್ರಯಾನ-1ರ ಯೋಜನಾ ನಿರ್ದೇಶಕ ಎಂ.ಅಣ್ಣಾದುರೈ ಅವರ ಒತ್ತಾಯದ ಮೇರೆಗೆ ಈ ಹೊಣೆಯನ್ನು ವಹಿಸಿಕೊಂಡಿದ್ದರು.
ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ, ನಿರ್ವಹಣಾ ಸಾಮಥ್ರ್ಯ ಹಾಗೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಮುತ್ತಯ್ಯ ವನಿತಾ ಅವರಿಗಿದೆ. ಹೀಗಾಗಿ ಅವರಿಗೆ ಈ ಜವಾಬ್ದಾರಿ ವಹಿಸಿದರೆ ಒಳ್ಳೆಯದು ಎಂದು ಅಣ್ಣಾದುರೈ ಇಸ್ರೋ ತಂಡಕ್ಕೆ ಸಲಹೆ ನೀಡಿದ್ದರು.
ಕರಿಧಾಲ್ ಅವರು ಇಸ್ರೋ ಕೊಡಮಾಡುವ ಎಂಓಎಂ, ಉಮೆನ್ ಅಚೀವರ್ಸ್ ಇನ್ ಏರೋಸ್ಪೇಸ್ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ಏರೋಸ್ಪೇಸ್ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವಿದೆ.
ಕರಿಧಾಲ್ ಮತ್ತು ವನಿತಾ ಅವರಲ್ಲಿ ಇರುವ ಮತ್ತೊಂದು ಸಾಮ್ಯತೆ ಎಂದರೆ ಇಬ್ಬರೂ ಸಹ ಸಮಯವನ್ನು ಲೆಕ್ಕಿಸದೇ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಇವರಿಬ್ಬರು ಮಾತ್ರವಲ್ಲ ಶೇ.30ರಷ್ಟು ಮಹಿಳೆಯರು ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದು, ಚಂದ್ರಯಾನ-2ಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.