ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಧಾರವಾಡಕ್ಕೆ ಬರುತ್ತಿರುವದಕ್ಕೆ ಸಂತೋಷವೂ ಅನಿಸುತ್ತೆ, ಇನ್ನೊಂದೆಡೆ ಖೇದವೂ ಆಗುತ್ತಿದೆ ಎಂದು ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 84 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನಮ್ಮೂರಿಗೆ ನಾನು ಬರುತ್ತಿರೋದು ಸಂತೋಷ ಆಗುತ್ತಿದೆ. ಆದ್ರೆ ಎಂ.ಎಂ.ಕಲಬುರ್ಗಿ ಹಾಗೂ ಗಿರಡ್ಡಿಯಂತ ಸ್ನೇಹಿತರನ್ನ ಕಳೆದುಕೊಂಡಿದ್ದೇನೆ. ಈ ಬಗ್ಗೆ ನನಗೆ ತುಂಬಾ ಖೇದ ಇದೆ. ಕಲಬುರ್ಗಿ ಹಾಗೂ ಗಿರಡ್ಡಿಯವರು ನನಗೆ ಬಹಳ ಆತ್ಮೀಯ ಸ್ನೇಹಿತರು. ಅವರು ಇಂದು ನಮ್ಮ ಮಧ್ಯೆ ಇಲ್ಲ ಎಂಬುವುದೇ ಬೇಸರದ ಸಂಗತಿ ಎಂದು ಹೇಳಿದರು.
ಈ ಬಾರಿ ಸಮ್ಮೇಳನದಲ್ಲಿ ಸಂಸ್ಕೃತಿ, ಭಾಷೆ, ಗಡಿಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಬೇಕು. ಅಲ್ಲದೆ ಈ ಭಾಗದ ಸಮಸ್ಯೆಯಾದ ಮಹದಾಯಿಯ ಬಗ್ಗೆಯೂ ಚರ್ಚೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ನಿ ಸತ್ಯಬಾಮಾ, ಮಗಳು ಜಯಶ್ರೀ ಕಂಬಾರ ಹಾಗೂ ಮೊಮ್ಮಗಳು ಪ್ರೀತಿ ಅವರೊಂದಿಗೆ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಾರೆ.
ಕುಟುಂಬ ಸಮೇತರಾಗಿ ಆಗಮಿಸಿದ ಡಾ. ಚಂದ್ರಶೇಖರ ಕಂಬಾರ ಅವರನ್ನು ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಿಂಗರಾಜ್ ಅಂಗಡಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ಎಲ್ಲರು ಜೊತೆಗೂಡಿ ಧಾರವಾಡದತ್ತ ಪಯಣ ಬೆಳೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv