ಚಂಡೀಗಢ: ನೆರೆ ಮನೆಯ ಬಾಲಕನಿಗೆ ನಾಯಿ ಕಚ್ಚಿದ್ದಕ್ಕೆ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಚಂಡೀಗಢದ ಶಿವಾಲಿಕ್ ಅವೆನ್ಯೂ ಪ್ರದೇಶದ ನಿವಾಸಿ ಅಮರಿಂದರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಮರಿಂದರ್ ಪಕ್ಕದ ಮನೆಯ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮರಿಂದರ್ ಸಾಕಿದ ಲಾಬ್ರಡರ್ ನಾಯಿ ನನ್ನ ಮಗ ರೆಹತ್ಪ್ರೀತ್(6)ಗೆ ಕಚ್ಚಿ ತೀವ್ರ ಗಾಯಗೊಳಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶನಿವಾರ ಮನೆಯ ಮುಂದೆ ನನ್ನ ಮಗ ರೆಹತ್ಪ್ರೀತ್ ಆಟವಾಡುತ್ತಿದ್ದನು. ಈ ವೇಳೆ ಅಮರಿಂದರ್ ತಾನು ಸಾಕಿದ್ದ 1 ಲಾಬ್ರಡರ್ ಹಾಗೂ 1 ಪಿಟ್ಬುಲ್ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿದ್ದನು. ಆಗ ಏಕಾಏಕಿ ಲಾಬ್ರಡರ್ ನಾಯಿ ನನ್ನ ಮಗನ ಮೇಲೆ ದಾಳಿ ಮಾಡಿತು. ಆತನ ಕಾಲು ಹಾಗೂ ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿತು ಎಂದು ಆರೋಪಿಸಿದ್ದಾರೆ.
ತಕ್ಷಣ ಅಮರಿಂದರ್ ಕೂಡ ಮಗನ ರಕ್ಷಣೆಗೆ ಬಂದು ನಾಯಿಯನ್ನು ಎಳೆದುಕೊಂಡು ಹೋದ. ಬಳಿಕ ನಾನು ತಕ್ಷಣ ಮಗನನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದೆ. ಅಮರಿಂದರ್ ನಿರ್ಲಕ್ಷ್ಯ ತೋರಿ, ನಾಯಿಯ ಚೈನ್ ಬಿಗಿಯಾಗಿ ಹಿಡಿದುಕೊಳ್ಳದೆ ವಾಕಿಂಗ್ ಬಂದಿದ್ದನು. ಆದ್ದರಿಂದ ನಾಯಿ ಆತನಿಂದ ಬಿಡಿಸಿಕೊಂಡು ಏಕಾಏಕಿ ಮಗನ ಮೇಲೆ ದಾಳಿ ಮಾಡಿತು ಎಂದು ಬಾಲಕನ ತಂದೆ ಆರೋಪಿಸಿದ್ದು, ಬುಧವಾರ ಅಮರಿಂದರ್ ವಿರುದ್ಧ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಅಮರಿಂದರ್ ವಿರುದ್ಧ ಐಪಿಸಿ ಸೆಕ್ಷನ್ 323, 28 ಮತ್ತು 506 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆಗಳು ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ದೋರಣೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದೆ.