ಬೆಂಗಳೂರು: ಬಿಗ್ಬಾಸ್ ಸೀಸನ್ ಐದರ ಆಟ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಸ್ನೇಹದಿಂದ ಚಂದನ್ ಶಟ್ಟಿ ಹಾಗೂ ದಿವಾಕರ್ ಕರುನಾಡ ಜನತೆಯ ಮನ ಗೆದ್ದಿದ್ದಾರೆ. ಬಿಗ್ ಬಾಸ್ ಚಂದನ್ ಗೆದಿದ್ದಕ್ಕೆ ಕೆಲವರು ಸಂತೋಷಪಟ್ಟರೆ, ಇನ್ನೂ ಕೆಲವರು ಸಾಮಾಜಿಕ ಜಾಲತಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀನ್ ಗೆಲ್ಲಬೇಕು. ಗೆದ್ದ ಹಣವನ್ನು ನನ್ನ ಜೀವನದಲ್ಲಿ ನಾನು ಹೇಗೋ ಸಂಪಾದನೆ ಮಾಡುತ್ತೇನೆ ಎಂದು ಚಂದನ್ ಬಿಗ್ ಬಾಸ್ ಮನೆಯಲ್ಲಿ ದಿವಾಕರ್ಗೆ ಹೇಳಿದ್ದರು. ಈಗ ಚಂದನ್ ಶೆಟ್ಟಿ ಬಿಗ್ ಬಾಸ್ ಪಟ್ಟ ಪಡೆದು 50 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಗೆದ್ದ ಹಣದಲ್ಲಿ ಚಂದನ್ ದಿವಾಕರ್ಗೂ ಸ್ವಲ್ಪ ಕೋಡಬೇಕಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಹೇಳುತ್ತಿದ್ದಾರೆ.
ಈಗ ಈ ವಿಷಯದ ಬಗ್ಗೆ ಚಂದನ್ ಶೆಟ್ಟಿ ಪ್ರತಿಕ್ರಿಯಿಸಿ, ಗೆದ್ದ ಹಣದಲ್ಲೇ ದಿವಾಕರ್ಗೆ ಸಹಾಯ ಮಾಡಬೇಕು ಎಂದೇನಿಲ್ಲ. ನಾನು ದಿವಾಕರ್ ಗೆ ಕೊಡಬೇಕಾಗಿರುವುದು ತುಂಬಾ ಇದೆ. ಬೇರೆ ರೀತಿಯಲ್ಲೂ ನಾನು ದಿವಾಕರ್ ಗೆ ಸಹಾಯ ಮಾಡಬಹುದು. ಸಹಾಯ ಮಾಡುತ್ತೀನಿ ಎಂದು ಚಂದನ್ ಶೆಟ್ಟಿ ಖಡಕ್ ಉತ್ತರ ನೀಡಿದ್ದಾರೆ.
ನಾನು ಈ ಮೊದಲು ಕೆಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಈಗ ನನ್ನ ಗೆಳೆಯ ದಿವಾಕರ್ ನಟಿಸುವ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತೇನೆ. ನನ್ನ ಕಲ್ಪನೆಯ ದಿವಾಕರ್ ನನ್ನು ಇಟ್ಟುಕೊಂಡು ‘ದಿವಾಕರ್- ದಿ ಸೇಲ್ಸ್ ಮ್ಯಾನ್’ ಎಂದು ಒಂದು ಕಥೆ ಮಾಡಿದ್ದೇನೆ. ಅದನ್ನು ನಾನೇ ನಿರ್ದೇಶನ ಮಾಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.
ಚಂದನ್ ಶೆಟ್ಟಿ ನಿರ್ದೇಶಕನಾಗಬೇಕೆಂದು ಸ್ಯಾಂಡಲ್ ವುಡ್ ಗೆ ಬಂದಿದ್ದರು. ಆದರೆ ಡೈರೆಕ್ಟ್ ಆಗಿ ಡೈರೆಕ್ಟರ್ ಕ್ಯಾಪ್ ಹಾಕಿಕೊಳ್ಳಲು ಗಾಂಧಿನಗರದಲ್ಲಿ ಸಾಧ್ಯವಿರದ ಕಾರಣ ಟ್ರ್ಯಾಕ್ ಸಿಂಗರ್, ಲಿರಿಕ್ ರೈಟರ್, ರ್ಯಾಪ್ ಸಿಂಗಿಂಗ್ ಕಮ್ ಡೈರೆಕ್ಷನ್ ಮತ್ತು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ಆಲ್ಬಂ ಸಾಂಗ್ಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಹುಟ್ಟು ಹಾಕಿದರು.