ಮೈಸೂರು: ಚಾಮುಂಡಿ, ನಂದಿ ಬೆಟ್ಟದ ರೋಪ್ ವೇ ನಿರ್ಮಾಣಕ್ಕೆ ಜನರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ರೋಪ್ ವೇ ವಿಚಾರವನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿ ಪಡಿಸಲು 2022-2023 ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲವು ಯೋಜನೆಗಳನ್ನು ಘೋಷಿಸಿದ್ದರು. ಈ ವೇಳೆ ಚಾಮುಂಡಿ ಬೆಟ್ಟ, ಮುಳ್ಳಯ್ಯನಗಿರಿ, ನಂದಿಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡಲಿದೆ ಎಂದಿದ್ದರು. ಇದೀಗ ಚಾಮುಂಡಿ ಬೆಟ್ಟದ ರೋಪ್ ವೇಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದು ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಿಸುವ ವಿಚಾರವನ್ನು ಜಿಲ್ಲಾಡಳಿತ ಕೈ ಬಿಟ್ಟಿದೆ.
ಈ ಕುರಿತಂತೆ ಮೈಸೂರಿನಲ್ಲಿ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಎಸ್.ಟಿ. ಸೋಮಶೇಖರ್ ಅವರು, ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳ ಆಗುವುದಕ್ಕಿಂತ ಅದು ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಬೆಟ್ಟಕ್ಕೆ ಪ್ರವಾಸಿಗರು ಧಾರ್ಮಿಕ ಭಾವನೆಯಿಂದ ಬರುತ್ತಾರೆ. ಈ ಸ್ಥಳವನ್ನು ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ ಎನ್ನುವುದು ಸರ್ವರ ಅಭಿಪ್ರಾಯವಾಗಿದೆ.
ಬೆಟ್ಟಕ್ಕೆ ಹೋಗಲು ರಸ್ತೆ ಮಾರ್ಗವಿದೆ, ಮೆಟ್ಟಿಲುಗಳಿವೆ ಇಷ್ಟೇ ಸಾಕು, ರೂಪ್ ವೇ ಬೇಡ ಎಂದಿದ್ದಾರೆ. ಹೀಗಾಗಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ನಿರ್ಮಾಣದ ನಿರ್ಧಾರವನ್ನು ಬಿಟ್ಟಿದ್ದೇವೆ ಮತ್ತು ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತ ಪತ್ರದ ಮೂಲಕ ವಿವರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.