ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಸೇಫ್ ಅಲ್ಲ ಎಂಬ ಅಂಶವುಳ್ಳ ನಕಲಿ ಗುಪ್ತಚರ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುಪ್ತಚರ ಇಲಾಖೆಯೇ ಈ ವರದಿಯನ್ನು ನೀಡಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಕಲಿ ವರದಿಯಲ್ಲಿ ಏನಿದೆ?: ಈ ಬಾರಿ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಸೇಫ್ ಅಲ್ಲ. ವರುಣಾ, ಶಾಂತಿನಗರ, ಗಂಗಾವತಿ ಅಥವಾ ಬಸವಕಲ್ಯಾಣ ಕ್ಷೇತ್ರಗಳು ಸೇಫ್ ಅಂತ ಉಲ್ಲೇಖವಾಗಿದೆ. ಇಂಗ್ಲಿಷ್ ನಲ್ಲಿ ಸಿದ್ಧಪಡಿಸಿರುವ ಪ್ರತಿಯೊಂದು ಎಲ್ಲೆಡೆ ಹರಿದಾಡುತ್ತಿದ್ದು, ಇದು ನಕಲಿ ಪ್ರತಿ ಎಂದು ಗುಪ್ತದಳ ಇಲಾಖೆ ಸ್ಪಷ್ಟನೆ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ಗೊಂದಲ ಮೂಡಿಸಲು ಈ ರೀತಿ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಗುಪ್ತಚರ ಇಲಾಖೆ ತನ್ನ ವರದಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವ ಪದ್ಧತಿಯನ್ನು ಹೊಂದಿಲ್ಲ ಎಂಬುದಾಗಿ ಹೇಳಿದೆ.
ಇತ್ತ ನಕಲಿ ಗುಪ್ತಚರ ವರದಿ ವೈರಲ್ ಆಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.