ಚಾಮರಾಜನಗರ: ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದ್ರೂ ಅಮ್ಮನನ್ನು ನೋಡಲು ಹೋಗದೇ ಕೊರೊನಾ ವಿರುದ್ಧ ಹೋರಾಡುತ್ತಾ ಚಾಮರಾಜನಗರದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಜಿಲ್ಲಾಧಿಕಾರಿ ರವಿಯವರ ತಾಯಿ ಬಹುಅಂಗಾಂದ ವೈಫಲ್ಯದಿಂದ ಬಳಲುತ್ತಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಕೊರೊನಾ ಹರಡದಂತೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕಳೆದ ಐವತ್ತು ದಿನಗಳಿಂದ ತಮ್ಮ ಪ್ರೀತಿಯ ತಾಯಿಯನ್ನು ಭೇಟಿಯಾಗಲು ಹೋಗಿಲ್ಲ. ಒಬ್ಬ ಜಿಲ್ಲಾಧಿಕಾರಿ ಪಕ್ಕದ ಜಿಲ್ಲೆಯ ಚೆಕ್ಪೋಸ್ಟ್ ದಾಟಿ ಸುಲಭವಾಗಿ ಹೋಗಬಹುದು. ಸರ್ಕಾರ ವಿಧಿಸಿದ ನಿಯಮ ಪಾಲನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳು ಮಾದರಿಯಾಗಿದ್ದಾರೆ.
ವಿಪತ್ತಿನ ಸಂದರ್ಭದಲ್ಲಿ ವೈಯಕ್ತಿಕ ಜೀವನ ಬದಿಗೊತ್ತಿ ಕೊರೊನಾ ಯೋಧರಾಗಿ ದುಡಿಯುತ್ತಿರುವ ಜಿಲ್ಲಾಧಿಕಾರಿ ರವಿ ಅವರ ಕಾರ್ಯನಿರ್ವಹಣೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾಗ ವೈಯಕ್ತಿಕ ಹಿತಾಸಕ್ತಿ ಹಾಗು ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿ ಕೆಲಸ ಮಾಡಬೇಕಾಗುತ್ತದೆ ಎಂದು ಡಾ.ಎಂ.ಆರ್.ರವಿ ಹೇಳುತ್ತಾರೆ.