ಚಾಮರಾಜನಗರ: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯದ ಬಳಿಕ ಇಂದು ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.
1992 ಮೇ 21ರ ಮಧ್ಯರಾತ್ರಿ ಕಾಡುಗಳ್ಳ ವೀರಪ್ಪನ್ ಮತ್ತು ಸಹಚರರು ರಾಮಾಪುರ ಠಾಣೆಗೆ ದಾಳಿ ಮಾಡಿ ಐವರು ಪೊಲೀಸರನ್ನು ಬಲಿ ಪಡೆದು ಅಟ್ಟಹಾಸ ಮೆರೆದಿದ್ದರು. ಆತನ ದಾಳಿಯ ಕುರುಹುಗಳು, ಬುಲೆಟ್ಗಳು ಬಿದ್ದ ಗುರುತುಗಳನ್ನು ಸಚಿವರು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಇಳಂಗೋವನ್, ಗೋವಿಂದರಾಜು, ಸಿದ್ಧರಾಜು, ರಾಚಪ್ಪ, ಪ್ರೇಮ್ ಕುಮಾರ್ ಅವರಿಗೆ ಗೌರವ ಸಮರ್ಪಿಸಿದರು. ನಂತರ ಮಾತನಾಡಿದ ಸಚಿವರು ಗೋಪಿನಾಥಂನಲ್ಲಿರುವ ಅರಣ್ಯಾಧಿಕಾರಿ ಶ್ರೀನಿವಾಸನ್ ಅವರ ಸ್ಮಾರಕದ ರೀತಿ ರಾಮಾಪುರ ಠಾಣೆಯಲ್ಲಿ ವೀರಪ್ಪನ್ ದಾಳಿಗೆ ಬಲಿಯಾದ ಪೊಲೀಸರಿಗೆ ಸ್ಮಾರಕ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಮಾರಕ ನಿರ್ಮಿಸುವ ಮೂಲಕ ವೀರಪ್ಪನ್ ಕ್ರೌರ್ಯದ ವಿರುದ್ಧ ಹೋರಾಡಿ ಪ್ರಾಣ ತೆತ್ತ ಪೊಲೀಸರ ಬಲಿದಾನವನ್ನು ನೆನಪಿಸಿಕೊಳ್ಳುವ ಕೆಲಸವಾಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ರಾಮಾಪುರ ಪೊಲೀಸ್ ಠಾಣೆ ಬಳಿಕ ಸಚಿವರು ರಾಮಾಪುರದ ಶತಮಾನದ ಸರ್ಕಾರಿ ಶಾಲೆಗೂ ಭೇಟಿ ನೀಡಿದರು.