ಚಾಮರಾಜನಗರ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸರಳ ವಿವಾಹವಾದ ನವದಂಪತಿ ಮದುವೆಯ ಖರ್ಚನ್ನು ಕೊರೊನಾ ಪರಿಹಾರ ನಿಧಿಗೆ ನೀಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳವಾಗಿ ಮದುವೆ ಮಾಡಿಕೊಂಡು ಮದುವೆ ಖರ್ಚಿಗೆ ಎಂದು ಇಟ್ಟುಕೊಂಡಿದ್ದ 50 ಸಾವಿರ ರೂಪಾಯಿಗಳನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ನವಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರಮೂರ್ತಿ, ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಮೇಘನಾ ಸರಳವಾಗಿ ವಿವಾಹವಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ಹಾಗೂ ಪ್ರಧಾನಿ ಕೊರೊನಾ ಪರಿಹಾರ ನಿಧಿಗೆ 25 ಸಾವಿರ ರೂ. ಅನ್ನು ಆನ್ಲೈನ್ ಮೂಲಕ ಪಾವತಿಸಿದ್ದಾರೆ. ನವ ವಧುವರರ ಈ ಕೆಲಸಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.