ಚಾಮರಾಜನಗರ: ಮಾಜಿ ಸಚಿವ ಎನ್ ಮಹೇಶ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಇಂದು ನಗರದಲ್ಲಿ ನಡೆಯುತ್ತಿದ್ದ ಬಹುಜನ್ ದಿವಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ, ನನಗೂ ಹೊಟ್ಟೆ ಹಸೀತಾ ಇದೆ ಕುಳಿತುಕೊಳ್ಳಿ ಎಂದು ಹೇಳುವ ಸನ್ನಿವೇಶ ನಮಗೆ ಬಂದಿಲ್ಲ. ಸಮಯ 2.30 ಆದ್ರೂ ಯಾರೊಬ್ಬರೂ ಎದ್ದು ಹೋಗುತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.
ಹೊಟ್ಟೆ ಹಸಿದುಕೊಂಡು ಜನ ನಮ್ಮ ಮಾತನ್ನು ಕೇಳಿಕೊಂಡು ಕೂತಿದ್ದಾರೆ. ಬೇರೆ ಅವರ ಹಾಗೆ 300 ರೂಪಾಯಿ ಕೊಟ್ಟು ಕರೆದುಕೊಂಡು ನಾನು ಬಂದಿಲ್ಲ. ಒಂದು ಬಸ್ಸಿಗೆ 5000 ಸಾವಿರ ಕೊಟ್ಟು ಕರೆದುಕೊಂಡು ಬಂದಿಲ್ಲ ಎಂದು ಮಾಜಿ ಸಿಎಂಗೆ ಟಾಂಗ್ ನೀಡಿದ್ದಾರೆ.
ಟಾಂಗ್ ನೀಡಿದ್ದು ಯಾಕೆ..?
ಶುಕ್ರವಾರ ನಗರದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ಕಾರ್ಯಕರ್ತರಿಗೆ ಗದರಿದ್ದರು. ಹೇ ಕೂತುಕೋ ನಂಗೂ ಹೊಟ್ಟೆ ಹಸೀತಾ ಇದೆ. ಎಲ್ಲಿಗೆ ಹೋಗ್ತಾ ಇದ್ದೀಯಾ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಈ ಡೈಲಾಗ್ಗೆ ಎನ್.ಮಹೇಶ್ ಇಂದು ಕೌಂಟರ್ ಡೈಲಾಗ್ ಹೊಡೆದಿದ್ದಾರೆ.