ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಮೃತಪಟ್ಟ ಹಾಗೂ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಮಂದಿಯ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ಘಟನೆ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ತನಿಖೆ ನಡೆಸುವಂತೆ ಆದೇಶ ನೀಡಿದ ಬೆನ್ನಲ್ಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ಚಿನ್ನಪ್ಪಿ (55), ಮಾದೇಶ್, ಈರಣ್ಣ, ಲೋಕೇಶ್ (26), ಮಹದೇವ್ ಪೂಜಾರಿ (45), ಪುಟ್ಟಸ್ವಾಮಿ ಎಂಬವರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಏಳು ಮಂದಿಯ ಐಪಿಸಿ ಸೆಕ್ಷನ್ 304ರ ಅಡಿ (ಉದ್ದೇಶವಲ್ಲದ ಮಾನವ ಹತ್ಯೆ) ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಇಂದು ಕೂಡ ಹೆಚ್ಚಳವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತಿಬ್ಬರು ಇಂದು ಸಾವನ್ನಪ್ಪಿದ್ದಾರೆ. ಇದರೊಂದಿಗೆ ವಿಷ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿದೆ ಆಗಿದೆ. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಮಗೇಶ್ವರಿ (35) ಮತ್ತು ಸಾಲಮ್ಮ ಮೃತರಾಗಿದ್ದಾರೆ. ಮಗೇಶ್ವರಿ ಎಂಜಿ ದೊಡ್ಡಿ ಗ್ರಾಮದವರು, ಇವರ ಮೃತ ದೇಹವನ್ನು ಗ್ರಾಮಕ್ಕೆ ತರುತ್ತಿದಂತೆಯೇ ಮೃತರ ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರು ಪ್ರಸಾದ ತಯಾರು ಮಾಡಲು ಬಳಸಿದ ಸಾಮಾಗ್ರಿಗಳು ಸೇರಿದಂತೆ ತಯಾರು ಮಾಡಲು ಯಾರು ಭಾಗವಹಿಸಿದ್ದು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಆಸ್ಪತ್ರೆ ಸೇರಿದ್ದ ಮಂದಿಗೆ ಯಾವ ಚಿಕಿತ್ಸೆ ನೀಡಲಾಗಿತ್ತು ಹಾಗೂ ಯಾವ ವಿಷ ಸೇವಿಸಿದರೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv