ಇನ್ಮುಂದೆ ಮಲೆ ಮಹದೇಶ್ವರ ಚಿನ್ನದ ರಥಕ್ಕೆ ದವಸ, ನಾಣ್ಯ ಎಸೆಯುವಂತಿಲ್ಲ

Public TV
1 Min Read
CNG 7

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಗೆ ನಡೆಯುವ ಚಿನ್ನದ ರಥೋತ್ಸವದ ಸಂದರ್ಭದಲ್ಲಿ, ಇನ್ನು ಮುಂದೆ ಭಕ್ತರು ತೇರಿಗೆ ನಾಣ್ಯ, ದವಸ ಧಾನ್ಯಗಳನ್ನು ಎಸೆಯುವಂತಿಲ್ಲ.

ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಹರಕೆ ರೂಪದಲ್ಲಿ ರಥಕ್ಕೆ ಎಸೆಯಲು ತರುವ ಧಾನ್ಯ ಹಾಗೂ ನಾಣ್ಯಗಳನ್ನು ಭಕ್ತರು ಇನ್ನು ಮುಂದೆ ನಿಗದಿತ ಸ್ಥಳದಲ್ಲಿಯೇ ಹಾಕಬೇಕು ಎಂದು ಆಡಳಿತಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮೊದಲ ದಿನವೇ ಒಂದು ಕ್ವಿಂಟಾಲ್‍ನಷ್ಟು ದವಸ ಧಾನ್ಯ ಸಂಗ್ರಹವಾಗಿದೆ. 10 ಸಾವಿರದಷ್ಟು ಮೌಲ್ಯದ ನಾಣ್ಯ ಹಾಗೂ ನೋಟುಗಳು ಸಂಗ್ರಹವಾಗಿವೆ. ಧಾನ್ಯಗಳನ್ನು ದಾಸೋಹದ ಉದ್ದೇಶಕ್ಕೆ ಬಳಸಿದರೆ, ನಾಣ್ಯಗಳನ್ನು ಹುಂಡಿಗೆ ಹಾಕಲಾಗಿದೆ.

ಪ್ರತಿದಿನ ಚಿನ್ನದ ತೇರು ನೋಡುವುದಕ್ಕಾಗಿಯೇ ಬೆಟ್ಟಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ದೇವಸ್ಥಾನದ ಸುತ್ತ ತೇರು ಸಾಗುತ್ತಿರುವಾಗ ಭಕ್ತರು ತಮ್ಮ ಹೊಲಗದ್ದೆಯಲ್ಲಿ ಬೆಳೆದ ಬೆಳೆಯನ್ನು (ಅಕ್ಕಿ, ಹುರುಳಿ, ರಾಗಿ, ಬೇಳೆ, ಕಡಲೆಕಾಯಿ) ರಥದತ್ತ ಎಸೆದು ಹರಕೆ ತೀರಿಸುತ್ತಾರೆ. ಅದೇ ರೀತಿ ನಾಣ್ಯಗಳನ್ನು ಭಕ್ತಿಯಿಂದ ಎಸೆಯುವವರೂ ಇದ್ದಾರೆ. ಇನ್ನೂ ಕೆಲವರು ತಮ್ಮ ಮೊದಲ ಸಂಬಳವನ್ನು ಕಾಣಿಕೆ ರೂಪದಲ್ಲಿ ರಥಕ್ಕೆ ಅರ್ಪಿಸುತ್ತಾರೆ.

ಏನು ಕಾರಣ?:
ಎಸೆದ ನಾಣ್ಯಗಳನ್ನು ದೇವರ ಪ್ರಸಾದ ಎಂದು ನಂಬಿ ಅದನ್ನು ಹೆಕ್ಕುವುದಕ್ಕಾಗಿ ಮಹಿಳೆಯರು, ಮಕ್ಕಳೆನ್ನದೆ ಭಕ್ತರು ಮುಗಿಬೀಳುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಅಪಾಯ ಇದೆ. ಜೊತೆಗೆ ನೂಕುನುಗ್ಗಲು ಉಂಟಾಗುತ್ತದೆ. ರಥದ ಸಂಚಾರಕ್ಕೂ ತಡೆಯಾಗುತ್ತದೆ. ಅಕ್ಕಿ, ಬೇಳೆಕಾಳು ಹಾಗೂ ಇನ್ನಿತರ ಧಾನ್ಯಗಳನ್ನು ಎಸೆಯುವುದರಿಂದ ನೂರಾರು ಕೆಜಿಗಳಷ್ಟು ಆಹಾರ ಪದಾರ್ಥ ಹಾಳಾಗುತ್ತಿತ್ತು. ಇದನ್ನು ಮನಗಂಡು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.

ನಾಣ್ಯವನ್ನು ಎಸೆಯುವುದರಿಂದ ಚಿನ್ನದ ರಥಕ್ಕೆ ಅದರಲ್ಲೂ ವಿಶೇಷವಾಗಿ ಮಹದೇಶ್ವರ ಸ್ವಾಮಿಯ ಚಿನ್ನದ ಮೂರ್ತಿಗೆ ಹಾನಿಯಾಗುತ್ತಿತ್ತು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *