ಚಾಮರಾಜನಗರ: ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರ ಮಾಡುವುದೇ ಸಿಎಎ, ಎನ್.ಪಿ.ಆರ್ ಹಾಗೂ ಎನ್.ಆರ್.ಸಿ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನನಗೆ ಕರೆ ಮಾಡಿದ್ದರು ಎಂದು ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.
ಚಾಮರಾಜನಗರದಲ್ಲಿ ಬಹುಜನ ವಾಲೆಂಟಿಯರ್ ಫೋರ್ಸ್ ಆಯೋಜಿಸಿದ್ದ, ಪೌರತ್ವ ಪರೀಕ್ಷೆ ಏನಿದರ ಮರ್ಮ ಎಂಬ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕರೆ ಮಾಡಿದ್ದರು. ಮುಸ್ಲಿಮರಿಗೆ ಬೇರೆ ಬೇರೆ ದೇಶಗಳಿವೆ, ಕ್ರೈಸ್ತರಿಗೂ ಹಲವಾರು ದೇಶಗಳಿವೆ ಹಿಂದೂಗಳಿಗೂ ಒಂದು ರಾಷ್ಟ್ರ ಬೇಡವೇ ಎಂದು ಕೇಳಿದ್ದರು. ನೀವು ಯಾಕೆ ನಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದೀರಾ? ನಮ್ಮ ಜೊತೆ ಕೈಜೋಡಿಸಿ ಎಂದು ರಾಜನಾಥ್ ಸಿಂಗ್ ಹೇಳಿದ್ದರು ಎಂದು ಬಹಿರಂಗ ಪಡಿಸಿದರು.
ಆಗ ಮೊದಲು ಹಿಂದುಗಳು ಅಂದರೆ ಯಾರು ಪಟ್ಟಿ ಮಾಡಿ ಎಂದೆ. ಆರ್.ಎಸ್.ಎಸ್.ನ ಸಾರ್ವಕರ್ ಹಾಗೂ ಗೋರ್ವಕರ್ ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿತ್ತು. ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುವ ಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇನ್ನು ಮೂರು ವರ್ಷ ಕಳೆದರೆ ಆರ್.ಎಸ್.ಎಸ್. ಗೆ ನೂರು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಅವರ ಉದ್ದೇಶವನ್ನು ಬಿಜೆಪಿ ಸಾಕಾರಗೊಳಿಸಲು ಹೊರಟಿದೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಆರೋಪಿಸಿದರು.