ಚಾಮರಾಜನಗರ: ಕೊರೊನಾ ವೈರಸ್ ಭೀತಿಯಿಂದ ಕಾಡಂಚಿನ ಗ್ರಾಮದ ಜನರಲ್ಲಿ ಆಹಾರದ ಕೊರತೆ ಉಂಟಾಗಿದೆ. ಈ ಹಿನ್ನೆಲೆ ಪಬ್ಲಿಕ್ ಟಿವಿಯ ಚಾಲೆಂಜ್ ಸ್ವೀಕರಿಸಿದ ಚಾಮರಾಜನಗರದ ಹನೂರು ಪಟ್ಟಣದ ಜನಾಶ್ರಯ ಟ್ರಸ್ಟ್ ಕಾಡಂಚಿನ ಐದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದೆ.
ಕಾಡಂಚಿನ ಗ್ರಾಮಗಳಾದ ಶಾಗ್ಯ, ಗಾಣಿಗಮಂಗಲ, ಉಯಿಲನತ್ತ, ಪಡಿಸಲನತ್ತ, ಚೆಂಗಡಿ ಜನರಿಗೆ ಜನಾಶ್ರಯ ಟ್ರಸ್ಟ್ ನೆರವಿನ ಹಸ್ತ ಚಾಚಿದ್ದಾರೆ. ಜನಾಶ್ರಯ ಟ್ರಸ್ಟ್ ವತಿಯಿಂದ ಐದು ಸಾವಿರ ಕುಟುಂಬಗಳಿಗೆ ಅಕ್ಕಿ, ಅಡುಗೆ ಎಣ್ಣೆ, ಕಾಳುಗಳನ್ನು ಒಳಗೊಂಡ ಆಹಾರ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಆಹಾರ ಕಿಟ್ ಅಷ್ಟೇ ಅಲ್ಲದೇ ಐದು ಸಾವಿರ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಕಾಡಂಚಿನ ಜನರಿಗೆ ಥರ್ಮಲ್ ಸ್ಕ್ರೀನಿಂಗ್ ಕೂಡ ಟ್ರಸ್ಟ್ ಸದಸ್ಯರು ಮಾಡಿದ್ದಾರೆ. ಅಲ್ಲದೇ ಕಾಡಂಚಿನ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹಳ್ಳಿಯನ್ನು ಶುಚಿತ್ವವಾಗಿಟ್ಟುಕೊಂಡು ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಮುಂದೆಯೂ ಕೂಡ ಕರ್ನಾಟಕ ಲಾಕ್ಡೌನ್ ಮುಂದುವರೆದರೆ ಉಚಿತ ಊಟದ ವ್ಯವಸ್ಥೆ ಕೂಡ ಮಾಡ್ತಿವಿ ಎಂದು ಜನಾಶ್ರಯ ಟ್ರಸ್ಟ್ ನ ಗೌರವಾದ್ಯಕ್ಷ ವೆಂಕಟೇಶ್ ಹೇಳಿದ್ದಾರೆ.