ಚಾಮರಾಜನಗರ: ಇಂದು ತಿಂಗಳ ಕಡೆಯ ಭಾನುವಾರ ಕೂಡ ಹೌದು. ಅಷ್ಟೇ ಏಕೆ ಈ ವರ್ಷದ ಕಡೆ ಭಾನುವಾರ ಕೂಡ ಹೌದು. ಹೀಗಾಗಿಯೇ ಗಡಿ ಜಿಲ್ಲೆ ಚಾಮರಾಜನಗರದ ಪ್ರವಾಸಿ ತಾಣಗಳಲ್ಲಿ ಈಗ ಜನವೋ ಜನ. ಅದರಲ್ಲೂ ವನ್ಯಜೀವಿ ಮತ್ತು ಪ್ರಕೃತಿ ಪ್ರಿಯರು ಜಿಲ್ಲೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ರಾಜ್ಯಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗದಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಇದರ ಜೊತೆಗೆ ವನ್ಯಜೀವಿಗಳ ದರ್ಶನ ಪ್ರವಾಸಿಗರನ್ನು ಮತ್ತಷ್ಟು ದಿಲ್ ಖುಷ್ ಮಾಡಿಸಿದೆ.
29 ಡಿಸೆಂಬರ್ 2019ರ ಕಡೆಯ ಭಾನುವಾರ. ನೂತನ ವರ್ಷಾರಂಭ ಸ್ವಾಗತಕ್ಕೆ ಎಲ್ಲರೂ ಕಾತುರರಾಗಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರವಾಸಿ ತಾಣಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಹೊಸ ವರ್ಷಾಚರಣೆ ಸಂಭ್ರಮ ಆಚರಿಸಲು ತಮಿಳುನಾಡಿನ ಊಟಿ. ಕೇರಳ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ತೆರಳುತ್ತಿದ್ದಾರೆ. ಊಟಿ, ಕೇರಳಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಬಂಡೀಪುರ ರಾಷ್ಟ್ರೀಯ ಉದ್ಯಾನ ಇರುವುದರಿಂದ ಬಂಡೀಪುರಕ್ಕೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಸಾಮಾನ್ಯವಾಗಿ ರಜೆ ದಿನಗಳಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಆದರೆ ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಈಗ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ದಟ್ಟ ಕಾನನದ ನಡುವೆ ಹಸಿರು ಸೀರೆಯುಟ್ಟು ಕಂಗೊಳಿಸುವ ಅರಣ್ಯ ಪ್ರದೇಶದಲ್ಲಿ ತಂಪಾದ ವಾತಾರಣ ಇರುವುದರಿಂದ ಪೋಷಕರು ಮಕ್ಕಳೊಂದಿಗೆ, ಸ್ನೇಹಿತರೊಂದಿಗೆ ಬಂಡೀಪುರಕ್ಕೆ ಭೇಟಿ ನೀಡಿ ಒಂದು ಸುತ್ತು ಸಫಾರಿ ಮುಗಿಸಿಕೊಂಡು ನೂತನ ವರ್ಷಾಚರಣೆಗೆ ಊಟಿ ಹಾಗೂ ಕೇರಳದತ್ತ ಪ್ರವಾಸಿಗರು ತೆರಳುತ್ತಿದ್ದಾರೆ.
ಅತ್ತ ಸುಡುವ ಬಿಸಿಲು ಇಲ್ಲದೆ, ಇತ್ತ ಮಳೆಯೂ ಇಲ್ಲದೆ ಇರುವುದರಿಂದ ಹುಲಿ, ಆನೆ, ಚಿರತೆ, ಜಿಂಕೆ, ಸೀಳುನಾಯಿ, ಕಾಡೆಮ್ಮೆಗಳಂತಹ ವನ್ಯಜೀವಿಗಳು ಹೇರಳವಾಗಿ ನೋಡಲು ಸಿಗುತ್ತಿರುವುದು ಪ್ರವಾಸಿಗರಲ್ಲಿ ಮತ್ತಷ್ಟು ಸಂತಸ ತರುತ್ತಿದೆ. ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬಂಡೀಪುರ ಸಂಪೂರ್ಣವಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಹಸಿರು ಸೀರೆಯುಟ್ಟ ಮದುವಣಗಿತ್ತಿ ರೀತಿಯ ಬಂಡೀಪುರ ಎಲ್ಲಾ ವರ್ಗದವರನ್ನು ಹೆಚ್ಚು ಹೆಚ್ಚು ಅಕರ್ಷಿಸುತ್ತಿದೆ.
ಪ್ರವಾಸಿಗರು ನೂತನ ವರ್ಷಾಚರಣೆಗೆ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದರೆ ಬರುವ ಪ್ರವಾಸಿಗರನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಹೈರಣಾಗಿ ಹೋಗಿದೆ. ಕೆಲವರಿಗೆ ಸಫಾರಿ ಹೋಗಲು ಟಿಕೆಟ್ ಸಿಗದೆ ನಿರಾಸೆಯಿಂದ ವಾಪಸ್ ಹೋದ ಪ್ರಸಂಗ ಕೂಡ ನಡೆದಿದೆ. ಪ್ರವಾಸಿಗರ ಆಗಮನದಿಂದ ಅಷ್ಟೇ ಪ್ರಮಾಣದಲ್ಲಿ ಅರಣ್ಯ ಇಲಾಖೆಗೆ ಆದಾಯ ಹರಿದು ಬರುತ್ತಿರುವುದು ಸಂತಸದ ವಿಷಯವಾಗಿದೆ.