– ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆ ಆಗಿದ್ಯಾಕೆ?
– 15ನೇ ಹಣಕಾಸು ಆಯೋಗದ `ಅನುದಾನ’ ಲೆಕ್ಕ ಏನು?
ಬೆಂಗಳೂರು: ಸಾರ್ವತ್ರಿಕ ಚುನಾವಣೆ ಸನಿಹದಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕದ ಸರ್ಕಾರದ ನಡುವಣ ಸಂಘರ್ಷ ಮಹತ್ವದ ಘಟ್ಟ ತಲುಪಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್ಮಂತರ್ನಲ್ಲಿ (Delhi Chalo) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಎಂಎಲ್ಸಿಗಳು, ಸಂಸದರು ಪ್ರತಿಭಟನೆ ನಡೆಸಲಿದ್ದಾರೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲಾ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ-ಅಮಿತ್ ಶಾಗೆ ಕಿವಿ ಕೇಳಲ್ಲ, ನಿರ್ಮಲಾ ಸೀತಾರಾಮನ್ಗೆ ಕಣ್ಣು ಕಿವಿ ಎರಡೂ ಇಲ್ಲ: ರಾಮಲಿಂಗಾ ರೆಡ್ಡಿ
ಕಾಂಗ್ರೆಸ್ ಶಾಸಕರೆಲ್ಲಾ ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿ ಕಡೆ ಮುಖ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಜೆ ಭೋಪಾಲ್ಗೆ ತೆರಳಿದ್ದು, ನಾಳೆ ಬೆಳಗ್ಗೆ ದೆಹಲಿ ತಲುಪಲಿದ್ದಾರೆ. ಡಿಸಿಎಂ ನಿನ್ನೆಯೇ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. ಈ ಮಧ್ಯೆ, ಧರಣಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿರುವ ಬಿಜೆಪಿಗರನ್ನು ಕಾಂಗ್ರೆಸ್ಸಿಗರು ಕೆಣಕಲು ನೋಡಿದ್ದಾರೆ.
ಅನುದಾನ ತಾರತಮ್ಯ ಖಂಡಿಸಿ ಕರ್ನಾಟಕ ಸರ್ಕಾರ ಬುಧವಾರ ದೆಹಲಿ ಚಲೋ ಹಮ್ಮಿಕೊಂಡ ಬೆನ್ನಲ್ಲೇ ದಕ್ಷಿಣದ ಉಳಿದ ರಾಜ್ಯಗಳು ಎದ್ದು ಕುಳಿತಿವೆ. ಕರ್ನಾಟಕದ ಹೋರಾಟವನ್ನು ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳು ಕೂಡ ಬೆಂಬಲಿಸಿವೆ. ಗುರುವಾರ ದೆಹಲಿಯಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಜಂಟಿಯಾಗಿ ಕಪ್ಪು ಪಟ್ಟಿ ಧರಿಸಿ ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸಲಿವೆ. ಮತ್ತೊಂದೆಡೆ ಅನುದಾನ ಅನ್ಯಾಯ ಖಂಡಿಸಿ ಟಿಎಂಸಿ ಕೂಡ ಕೇಂದ್ರದ ವಿರುದ್ಧ ಕೋಲ್ಕತ್ತಾದಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸಿದೆ. ಫೆಬ್ರವರಿ 13 ರವರೆಗೂ ಈ ಪ್ರತಿಭಟನೆ ಮುಂದುವರೆಸಲಿದೆ. ಇದನ್ನೂ ಓದಿ: ಕೇಂದ್ರವನ್ನು ರಾಜ್ಯ ಸರ್ಕಾರದವರು ದೂರುವುದು ಸರಿಯಲ್ಲ, ಅಗತ್ಯವಿದ್ದಾಗಲೆಲ್ಲ ನೆರವು ನೀಡಿದೆ: ಪ್ರಜ್ವಲ್ ರೇವಣ್ಣ
ರಾಜ್ಯಕ್ಕೆ ಅನುದಾನ ಕೇಳಿದರೆ ಹಣಕಾಸು ಆಯೋಗದ ಕಡೆ ವಿತ್ತ ಸಚಿವೆ ಬೆರಳು ಮಾಡುತ್ತಿದ್ದಾರೆ. ಹಾಗಾದರೆ, ರಾಜ್ಯಕ್ಕೆ 15ನೇ ಹಣಕಾಸು ಯೋಜನೆಯಡಿ ತೆರಿಗೆ ಪಾಲು, ಅನುದಾನ ಕಡಿತ ಆಗಿದ್ದು ಏಕೆ ಎಂಬ ವಿವರ ಇಲ್ಲಿದೆ.
15ನೇ ಹಣಕಾಸು ಆಯೋಗದ `ಅನುದಾನ’ ಲೆಕ್ಕ
* 2020-2026ರ ಅವಧಿಗೆ ಅನ್ವಯವಾಗುವ ಹಣ ಹಂಚಿಕೆ ಶಿಫಾರಸು
* ಜನಸಂಖ್ಯೆ, ಭೂಪ್ರದೇಶ, ಅರಣ್ಯ, ಆದಾಯ ಅಂತರ, ತೆರಿಗೆ ಪರಿಗಣಿಸಿ ಅನುದಾನ ಹಂಚಿಕೆ
* 2011ರ ಜನಗಣತಿಯನ್ನು ಮೂಲ ವರ್ಷವಾಗಿ ಪರಿಗಣಿಸಿ ತೆರಿಗೆ ಪಾಲು ಹಂಚಿಕೆ
(ಈ ಹಿಂದಿನ ಎಲ್ಲಾ ಹಣಕಾಸು ಆಯೋಗಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ 1972ನೇ ಇಸವಿಯನ್ನು ಮೂಲ ವರ್ಷವಾಗಿ ಪರಿಗಣಿಸಿದ್ದವು)
ಕರ್ನಾಟಕಕ್ಕೆ ತೆರಿಗೆ ಪಾಲು ಕಡಿತ ಆಗಿದ್ಯಾಕೆ?
* ಜನಸಂಖ್ಯೆ ನಿಯಂತ್ರಣ ಇರುವ ಕಾರಣ ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ ಕಡಿಮೆ ಪಾಲು
* ತೆರಿಗೆ ಹಣ ಹಂಚಿಕೆಯಲ್ಲಿ ಕರ್ನಾಟಕಕ್ಕೆ 3.6%, ಕೇರಳಕ್ಕೆ 1.93%, ತಮಿಳುನಾಡಿಗೆ 4% ಪಾಲು
* ಇದು 14ನೇ ಹಣಕಾಸು ಆಯೋಗದ ಶಿಫಾರಸುಗಳಿಗಿಂತ ರಾಜ್ಯಕ್ಕೆ 13,633 ಕೋಟಿಯಷ್ಟು ಕಡಿಮೆ
(ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುವ ಹಣ 4 ಲಕ್ಷ ಕೋಟಿ ರೂಪಾಯಿ)
* ಜನಸಂಖ್ಯೆ ಹೆಚ್ಚಿರುವ ಕಾರಣ ಯುಪಿಗೆ 18%, ಬಿಹಾರಕ್ಕೆ 10% ತೆರಿಗೆ ಹಣದ ಪಾಲು