ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯಕ ಕಾರ್ಯದರ್ಶಿ 10 ಕೋಟಿ ರೂ. ಸಾಲ ಮಾಡಿ ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ಬಿ ಸಂಕನಗೌಡರ್ ನಾಪತ್ತೆಯಾದ ಸಹಾಯಕ ಕಾರ್ಯದರ್ಶಿ. ನಟ ದರ್ಶನ್ ಹೆಸರು ಹೇಳಿಕೊಂಡು ಮಲ್ಲಿಕಾರ್ಜುನ್ ವಿವಿಧ ಕಡೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದರು ಎನ್ನುವ ಆರೋಪ ಇವರ ಮೇಲಿದೆ.
ದರ್ಶನ್ ಸಹೋದರ ದಿನಕರ್ ಅವರನ್ನು ಮಲ್ಲಿಕಾರ್ಜುನ್ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲವು ದಿನಗಳ ನಂತರ ದರ್ಶನ್ ಅವರಿಗೆ ಹತ್ತಿರವಾಗಿದ್ದರು. ಅಷ್ಟೇ ಅಲ್ಲದೆ ಅವರ ಹಣಕಾಸಿನ ವ್ಯವಹಾರನ್ನು ನೋಡಿಕೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ದರ್ಶನ್ ಅವರನ್ನು ಸಂಪರ್ಕಿಸಲು ಮಲ್ಲಿಕಾರ್ಜುನ್ ಅವರಿಂದ ಮೊದಲು ಒಪ್ಪಿಗೆ ಪಡೆಯಬೇಕಾಗಿತ್ತು. ಹೀಗಾಗಿ ದರ್ಶನ್ ಅವರ ಹೆಸರಿನ ಬಲದಿಂದಲೇ ಮಲ್ಲಿಕಾರ್ಜುನ್ ಬರೋಬ್ಬರಿ 10 ಕೋಟಿ ರೂ. ಸಾಲ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಈ ವಿಚಾರದ ಬಗ್ಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಏನು ವಂಚನೆ ನಡೆದಿದೆ ಗೊತ್ತಿಲ್ಲ. ದರ್ಶನ್ಗೆ ಆರ್ಥಿಕ ಸಮಸ್ಯೆ ಇದೆ ಎಂದರೆ ಹಣ ನೀಡುವ ಮೊದಲು ದರ್ಶನ್ ಅವರನ್ನೇ ಸಂಪರ್ಕಿಸಬೇಕು. ಯಾರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. 10 ದಿನಗಳ ಹಿಂದೆ ನನ್ನ ಜೊತೆ ಮಾತನಾಡಿದ್ದಾಗ ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿದ್ದರು. ಈಗ ನಾನು ಅವರಿಗೆ ಫೋನ್ ಮಾಡಿದ್ದರೂ ಸ್ವಿಚ್ ಆಫ್ ಆಗಿದೆ. ಈ ವಿಚಾರದಲ್ಲಿ ದರ್ಶನ್ ಹೆಸರು ಯಾಕೆ ಬಂತು ಎನ್ನುವುದೇ ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.