ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಬರಯಲು ಸಿದ್ಧವಾಗಿರುವ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದ ಎಕ್ಸ್ ಕ್ಲೂಸಿವ್ ಫೋಟೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾ ಫೆಬ್ರವರಿ ತಿಂಗಳಲ್ಲಿ ರಿಲೀಸ್ ಅಗಲು ರೆಡಿಯಾಗುತ್ತಿದೆ.
ದುರ್ಯೋಧನ ಪಾತ್ರದಲ್ಲಿ ದರ್ಶನ್ ಮಿಂಚುತ್ತಿದ್ದು, ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ನ್ನು ಪರಿಚಯಿಸುವ ಹಾಡಿನ ಕೆಲವು ದೃಶ್ಯಗಳು ಮತ್ತು ಫೋಟೋಗಳು ಲಭ್ಯವಾಗಿವೆ. ಕೇವಲ ಒಂದು ಹಾಡಿಗಾಗಿ ಏಕಕಾಲದಲ್ಲಿ ಸುಮಾರು 500 ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ರಾಜವೈಭೋಗದಿಂದ ಅಲಂಕೃತಗೊಂಡ ಗಜರಾಜ, 50 ರಿಂದ 60 ಅಶ್ವಗಳು, ಸಹ ಕಲಾವಿದರನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ಅರಮನೆಗಾಗಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದೆ.
ಏನು ವಿಶೇಷ?: ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಒಮ್ಮೆ ತ್ರಿಡಿ ಕ್ಯಾಮೆರಾದಲ್ಲಿ ಶೂಟ್ ಮಾಡಿದ್ರೆ, ಇನ್ನೊಮ್ಮೆ ಸಾಧರಣಾ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಇನ್ನು ಕೆಲವು 8 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯಗೊಳ್ಳಲಿದ್ದು, ಫೆಬ್ರವರಿ 16ರಂದು ಸಿನಿಮಾ ರಿಲೀಸ್ ಆಗಲಿದೆ. ಆನೆಯ ಮೇಲೆ ಕುಳಿತು ಬರುತ್ತಿರುವ ದರ್ಶನ್ ಶೂಟಿಂಗ್ ನಡೆದಿದ್ದು, ಇದೇ ಹಾಡಿನಲ್ಲಿ ನಟಿ ಮೇಘನಾ ರಾಜ್ ಸಹ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿಬರಲಿದೆ.
https://www.youtube.com/watch?v=K_B9Pw7SXRM
ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ನಟಿಸಿದ ಅಭಿಮನ್ಯುವಿನ ಪಾತ್ರದ ಟೀಸರ್ ಚಿತ್ರತಂಡ ಬಿಡುಗಡೆ ಮಾಡಿತ್ತು.