ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದ ವಿಚಾರದಲ್ಲಿಯೂ ಬಾಕ್ಸಾಫೀಸ್ ಸುಲ್ತಾನ ಎಂಬ ಬಿರುದಿಗೆ ತಕ್ಕುದಾಗಿಯೇ ಅಬ್ಬರಿಸಿದ್ದಾರೆ. ಅದೇನೇ ಅಡೆತಡೆಗಳು ಬಂದರೂ ಕುರುಕ್ಷೇತ್ರದತ್ತ ಜನರ ಪ್ರೀತಿ, ಆದರಗಳು ಮಾತ್ರ ಕಡಿಮೆಯಾಗಿಲ್ಲ. ಕನ್ನಡ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೂಡಾ ಕುರುಕ್ಷೇತ್ರ ಮನಗೆದ್ದಿದೆ. ಕೌರವೇಂದ್ರನಾಗಿ ದರ್ಶನ್ ಎಲ್ಲರಿಗೂ ಆಪ್ತವಾಗಿದ್ದಾರೆ. ಕುರುಕ್ಷೇತ್ರದ ಬಿಸಿ ಹೀಗೆ ಮುಂದುವರೆದಿರುವಾಗಲೇ ದರ್ಶನ್ ‘ಒಡೆಯ’ನಾಗಿ ಶೀಘ್ರದಲ್ಲಿಯೇ ಅಭಿಮಾನಿಗಳ ಮುಂದೆ ಅವತರಿಸೋ ಸನ್ನಾಹದಲ್ಲಿದ್ದಾರೆ.
ಯಜಮಾನ ಚಿತ್ರದ ಬಳಿಕ ದರ್ಶನ್ ಒಡೆಯ ಚಿತ್ರದ ಚಿತ್ರೀಕರಣವನ್ನು ವೇಗವಾಗಿ ಮುಗಿಸಿಕೊಂಡಿದ್ದರು. ಪಕ್ಕಾ ಪ್ಲ್ಯಾನಿಂಗ್ನೊಂದಿಗೆ ಬೇಗನೆ ಈ ಸಿನಿಮಾದ ಚಿತ್ರೀಕರಣ ಸಮಾಪ್ತಿಯಾಗಿದೆ. ಇದೀಗ ಇದರ ಅಂತಿಮ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ತಿಂಗಳ ಕಡೇಯ ಹೊತ್ತಿಗೆಲ್ಲ ಇದರ ಎಲ್ಲ ಕೆಲಸವೂ ಸಮಾಪ್ತಿಯಾಗುತ್ತದೆ. ಆದ್ದರಿಂದಲೇ ಮುಂದಿನ ತಿಂಗಳು ದಸರಾ ಗಿಫ್ಟ್ ಎಂಬಂತೆ ಒಡೆಯನ ದರ್ಶನ ಮಾಡಿಸಲು ಚಿತ್ರತಂಡ ತಯಾರಾಗಿರುವಂತಿದೆ.
ಎಲ್ಲವೂ ಅಂದುಕೊಂಡಂತೆಯೇ ಆದರೆ ಒಡೆಯ ಚಿತ್ರ ಸೆಪ್ಟೆಂಬರ್ 22ರಂದು ತೆರೆಗಾಣೋ ಸಾಧ್ಯತೆಗಳಿವೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಅದ್ದೂರಿ ಚಿತ್ರ ಎಚ್ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ದರ್ಶನ್ ಖದರ್ ಅನ್ನು ಮತ್ತಷ್ಟು ಮಿರುಗಿಸುವಂಥಾ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಕೂಡಾ ಭಾರೀ ಕುತೂಹಲವಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಯಶಸ್ ಮತ್ತು ಪಂಕಜ್ ದರ್ಶನ್ ಸಹೋದರರಾಗಿ ನಟಿಸಿದ್ದಾರೆ. ಬೃಹತ್ ತಾರಾಬಳಗವನ್ನು ಹೊಂದಿರೋ ಈ ಚಿತ್ರ ಮುಂದಿನ ತಿಂಗಳು ತೆರೆಗಾಣೋದು ಬಹುತೇಕ ಖಚಿತ.