ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಮೇಲಿನ ಅಭಿಮಾನಕ್ಕೆ ಸರಿಸಾಟಿ ಇಲ್ಲ ಎಂಬಂತೆ ಅಭಿಮಾನಿಯೊಬ್ಬರು ಮದುವೆಯ ಆಮಂತ್ರಣ ಪತ್ರದಲ್ಲಿ ದರ್ಶನ್ ಫೋಟೋ ಹಾಕಿಸಿ ತಮ್ಮ ನಟನ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.
ಕೆ.ಆರ್ ನಗರದ ನಾಗೇಂದ್ರ ನಿವಾಸಿ ಬ್ರೂಸ್ಲಿ ನಟ ದರ್ಶನ್ನ ಕಟ್ಟಾ ಅಭಿಮಾನಿಯಾಗಿದ್ದಾರೆ. ಆದ್ದರಿಂದ ಮದುವೆ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ತಮ್ಮ ಭಾಮೈದನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದೇವರ ಬದಲು ದರ್ಶನ್ ಫೋಟೋ ಹಾಕಿಸಿ ಪತ್ರಿಕೆಯನ್ನು ಮುದ್ರಿಸಿದ್ದಾರೆ.
ಭಾಮೈದ ಸುನೀಲ್ ಅವರ ಮದುವೆ ನಯನ ಜೊತೆ ಜನವರಿ 7 ರಂದು ನಿಶ್ಚಯವಾಗಿದೆ. ಇವರ ಆಮಂತ್ರಣದಲ್ಲಿ ದರ್ಶನ್ ಮತ್ತು ಅವರ ಮಗನ ಫೋಟೋ ಹಾಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ರವರ ಆಶೀರ್ವಾದದೊಂದಿಗೆ ಎಂದು ಮದುವೆಯ ಮುಂದಿನ ಪುಟದಲ್ಲಿ ಬರೆದು ಪ್ರಿಂಟ್ ಮಾಡಿಸಿದ್ದಾರೆ.
ಮದುವೆಯ ಧಾರೆ, ಮುಹೂರ್ತ, ಸ್ಥಳ ತಿಳಿಸುವ ಪುಟದಲ್ಲಿ ಕುರುಕ್ಷೇತ್ರದ ಸಿನಿಮಾದ ಗದೆ ಹಿಡಿದು ನಿಂತಿರುವ ಫೊಟೋ ಹಾಕಿದ್ದಾರೆ. ಇನ್ನು ಇದೇ ವರ-ವಧುವಿನ ಪೋಟೋ, ಅವರ ಹೆಸರು ಹಾಕಿದ್ದು, ವಿಶೇಷ ಆಹ್ವಾನಿತರು ಎಂದು ಮೀನಾ ತೂಗುದೀಪ್, ದರ್ಶನ್ ತೂಗುದೀಪ್ ಮತ್ತು ದಿವಾಕರ್ ತೂಗುದೀಪ್ ಎಂದು ಅವರ ಹೆಸರು ಹಾಕಿಸಿದ್ದಾರೆ.
ಆಮಂತ್ರಣದ ಕೊನೆಯಲ್ಲಿ ದರ್ಶನ್ ಅವರ ತಂದೆ, ತಾಯಿ ಮತ್ತು ಸಹೋದರನ ಫೋಟೋ ಹಾಕಿ ದರ್ಶನ್ ಅಭಿಮಾನಿಗಳ ಬಳಗ ಎಂದು ಮುದ್ರಿಸಿದ್ದಾರೆ.