ಮಂಡ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿಯೊಬ್ಬನಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಅಭಿಮಾನಿ ಕಿರಣ್ಗೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಸುಮಲತಾ ನ್ಯಾಮಿನೇಷನ್ ರ್ಯಾಲಿಗೆ ಬಂದು ವಾಪಸ್ಸಾಗುವಾಗ ಗಂಭೀರ ಗಾಯಗೊಂಡಿದ್ದರು. ಬಡ ಕುಟುಂಬವಾದ ಕಿರಣ್ಗೆ ಚಿಕಿತ್ಸೆ ಪಡೆಯಲು ಹಣದ ಅವಶ್ಯಕತೆ ಇತ್ತು. ಇದನ್ನು ಮನಗಂಡ ನಟ ದರ್ಶನ್ ತಮ್ಮ ಆಪ್ತ ಇಂಡುವಾಳು ಸಚ್ಚಿದಾನಂದ ಅವರ ಮೂಲಕ ಒಂದು ಲಕ್ಷ ರೂ. ಹಣವನ್ನು ಕಿರಣ್ ಕುಟುಂಬಕ್ಕೆ ತಲುಪಿಸಿದ್ದಾರೆ. ದರ್ಶನ್ ಅವರ ಈ ಸಹಾಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಗ್ಗೆ ಮಾತನಾಡಿದ ದರ್ಶನ್ ಆಪ್ತ ಸಚ್ಚಿದಾನಂದ ಅವರು, ಕಿರಣ್ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಅವರು ಬಹಳ ಸಾಧಾರಣ ಕುಟುಂಬದವರಾಗಿದ್ದು ಅವರ ಅಣ್ಣ ಗ್ಯಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ನಾಲ್ಕೈದು ಲಕ್ಷ ಖರ್ಚು ಮಾಡಿದ್ದಾರೆ. ಮುಂದೆ ಅವರ ಜೀವನಾಂಶದ ಬಗ್ಗೆ ಈ ಗ್ರಾಮದ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ. ಮುಂದೆ ನಾವು ಕೂಡ ವೈಯಕ್ತಿಕವಾಗಿ ಸಹಾಯ ಮಾಡುವುದರ ಜೊತೆಗೆ ಅವರ ಜೀವನಕ್ಕೆ ಏನು ಬೇಕು ಎಂಬುದು ಮಾತನಾಡಿ ಕೆಲವು ದಾನಿಗಳನ್ನು ಸಂಪರ್ಕಿಸಿ ಮಾಡಿ ಕಿರಣ್ಗಾಗಿ ಹಣ ಸಂಗ್ರಹ ಮಾಡಬೇಕೆಂದುಕೊಂಡಿದ್ದೇವೆ ಎಂದರು.
ಅಲ್ಲದೆ ದರ್ಶನ್ ಅಣ್ಣ 1 ಲಕ್ಷ ಹಣ ಕೊಟ್ಟಿದ್ದಕ್ಕೆ ಅವರಿಗೆ ಒಳ್ಳೆಯದಾಗಲಿ. ಇತರ ಬಹಳಷ್ಟು ಕಣ್ಣಿಗೆ ಕಾಣದಂತೆ ಅವರು ಕೆಲಸ ಮಾಡುತ್ತಿದ್ದಾರೆ. ದರ್ಶನ್ ಅವರು ಬಡವರ ಪಾಲಿಗೆ ನಂದಾದೀಪ ಆಗಲಿ ಎಂದು ದೇವರಿಗೆ ಕೇಳಿಕೊಳ್ಳುತ್ತೇನೆ. ಅಭಿಮಾನಿ ಕಿರಣ್ಗೂ ದೇವರಿಗೆ ಕೇಳಿಕೊಳ್ಳುತ್ತೇನೆ. ಕಿರಣ್ ಜೊತೆ ನಾವು ಇರುತ್ತೇವೆ, ಮುಂದೆಯೂ ಇರುತ್ತೇವೆ ಎಂದು ಅವರ ಕುಟುಂಬಕ್ಕೆ ಹೇಳಿದ್ದೇನೆ ಎಂದು ಸಚ್ಚಿದಾನಂದ ಅವರು ತಿಳಿಸಿದ್ದಾರೆ.