ಬೆಂಗಳೂರು: ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗುರುವಾರ ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆತ್ಮೀಯ ಗೆಳೆಯ ಸೃಜನ್ ಅವರಿಗೆ ಸರ್ಪ್ರೈಸ್ ನೀಡಿ ಶುಭಾಶಯ ಕೋರಿದ್ದಾರೆ.
ಸೃಜನ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ದರ್ಶನ್ ಶುಭಾಶಯ ಕೋರುವ ವಿಡಿಯೋವನ್ನು ಹಿರಿಯ ಹಾಸ್ಯ ನಟ ಮಂಡ್ಯ ರಮೇಶ್ ಸೃಜನ್ ಅವರಿಗೆ ತೋರಿಸಿದ್ದಾರೆ. ನಮಸ್ಕಾರ ಸೃಜನ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸೃಜನ್ಗೆ ಸೃಜ ತೂಗುದೀಪ ಎಂದು ಹೇಳಬೇಕು ಹಾಗೂ ನನಗೆ ದರ್ಶನ್ ಲೋಕೇಶ್ ಎಂದು ಕರೆಯುತ್ತಾರೆ. ನಾನು ಸೃಜನ್ಗೆ ಹುಟ್ಟುಹಬ್ಬದ ಶುಭಾಶಯ ಮಾತ್ರ ಕೋರುವುದಿಲ್ಲ. ಆದರೆ ಆತನ ಸಾಧನೆ ಬಗ್ಗೆ ತಿಳಿಸುತ್ತೇನೆ.
ದರ್ಶನ್ ಹೇಳಿದ್ದೇನು..?
ಸೃಜ ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಈಗ ಈ ಸ್ಥಾನದಲ್ಲಿ ನಿಂತಿದ್ದಾನೆ. ಸೃಜನ್ ‘ಲೋಕೇಶ್ ಪ್ರೊಡಕ್ಷನ್’ ಶುರು ಮಾಡಿ ತಾನು ಪಟ್ಟ ಕಷ್ಟವನ್ನು ಬೇರೆಯವರು ಪಡಬಾರದೆಂದು ಸುಮಾರು ಜನರನ್ನು ಇರಿಸಿಕೊಂಡು ಅವರನ್ನು ಬೆಳೆಸಿಕೊಂಡು, ತಾನು ಬೆಳೆಯುತ್ತಿದ್ದಾನೆ. ಸೃಜನ್ ಈಗ ತಿರುಗಿ ನೋಡಿದರೆ ಅವನ ಹಿಂದೆ ಸಾಕಷ್ಟು ಜನ ನಿಂತಿರುತ್ತಾರೆ. ಏಕೆಂದರೆ ಸಾಕಷ್ಟು ಜನ ಸೃಜನ್ನನ್ನು ನಂಬಿಕೊಂಡಿದ್ದಾರೆ.
ನಾನು ಕೂಡ ಹಾಗೇ ಬೆಳೆದಿದ್ದು. ನನಗೆ ಲೋಕೇಶ್ ಪ್ರೊಡಕ್ಷನ್ ಬೇರೆ ಅಲ್ಲ ಹಾಗೂ ತೂಗುದೀಪ ಪ್ರೊಡಕ್ಷನ್ ಬೇರೆ ಅಲ್ಲ. ಅದು ಎರಡು ಒಂದೇ ಪ್ರೊಡಕ್ಷನ್ ಆಗಿ ಶುರು ಮಾಡಿದ್ದೇವು. ಏಕೆಂದರೆ ನಾವು ಇದ್ದರು ಇಲ್ಲದಿದ್ದರು ನಮ್ಮ ತಂದೆಯ ಪ್ರೊಡಕ್ಷನ್ ಹೌಸ್ ಅನ್ನು ಬೆಳೆಸಿಕೊಂಡು ಹೋಗಬೇಕು. ಆ ಕಾರ್ಯವನ್ನು ಸೃಜನ್ ಮಾಡುತ್ತಿದ್ದಾನೆ. ಸೃಜನ್ಗೆ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದೇನೆ ಎಂದು ದರ್ಶನ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಈಗ ನಾನು ಸೃಜನ್ಗೆ ಹೇಳುತ್ತಿರುತ್ತೇನೆ. ನಮಗೆ 60-70 ವರ್ಷವಾದಾಗ ಒಂದು ಕಡೆ ಕುಳಿತುಕೊಂಡು ಆಗ ಏನು ಮಾತಡಬೇಕೋ ಈಗಿನಿಂದಲೇ ತಯಾರಿ ನಡೆಸಿಕೊಳ್ಳುತ್ತಿದ್ದೇವೆ. ಈ ವಿಷಯ ಸೃಜನ್ಗೂ ತುಂಬಾ ಚೆನ್ನಾಗಿ ಗೊತ್ತು. ನಾನು ಮತ್ತೊಮ್ಮೆ ಮಗದೊಮ್ಮೆ ನಿನಗೆ ಹುಟ್ಟುಹಬ್ಬ ಹಾರ್ದಿಕ ಶುಭಾಶಯ ಕೋರುತ್ತಿದ್ದೇನೆ. ನೀನು ಹೀಗೆ ಬೆಳೆಯುತ್ತಿರು. ನೀನು ಯಾವತ್ತು ಹಿಂದೆ ತಿರುಗಿ ನೋಡಿದರೂ ಆ ಭಗವಂತ ನಿನಗೆ ಕೊಡದೇ ಇದ್ದರು, ನಾನು ಯಾವಾಗಲೂ ನಿನ್ನ ಹಿಂದೆ ಇರುತ್ತೇನೆ ಎಂದು ದರ್ಶನ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.