ಬೆಂಗಳೂರು: ಏನ್ನನಾದರೂ ಸಾಧಿಸಬೇಕೆಂಬ ನಿಜವಾದ ಹಸಿವು ಹೊಂದಿರುವವರಿಗೆ ಸದಾ ಸ್ಫೂರ್ತಿಯಾಗುತ್ತಲೇ ಸಾಥ್ ನೀಡುವ ವ್ಯಕ್ತಿತ್ವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು. ಹೊಸಬರಿಗೆ, ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರೋ ಅವರು ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ಮೂಲಕವೂ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಇದೀಗ ದರ್ಶನ್ ಅವರು ಯಜಮಾನ ಚಿತ್ರದಲ್ಲಿ ಮಾಜಿ ಸೈನಿಕರಿಬ್ಬರಿಗೆ ಅವಕಾಶ ಕಲ್ಪಿಸೋ ಮೂಲಕ ಸುದ್ದಿಯಲ್ಲಿದ್ದಾರೆ.
ಯಜಮಾನ ಚಿತ್ರದ ಎರಡು ವಿಲನ್ ಕ್ಯಾರೆಕ್ಟರುಗಳನ್ನು ಮಾಜಿ ಯೋಧರಿಬ್ಬರು ನಿರ್ವಹಿಸಿದ್ದಾರಂತೆ. ಮಾಜಿ ಯೋಧರಾದ ಅರುಣ್ ಮತ್ತು ಕಾಮರಾಜ್ ದರ್ಶನ್ ಅವರ ಕಾಳಜಿಯಿಂದಲೇ ಯಜಮಾನ ಚಿತ್ರದ ಭಾಗವಾಗಿದ್ದಾರೆ. ಇದರಲ್ಲಿ ಕಾಮರಾಜ್ ತಮಿಳುನಾಡಿನವರು. ಶಂಕರ್ ನಿರ್ದೇಶನದ ಐ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಎದುರು ಈತ ವಿಲನ್ ಆಗಿ ಅಬ್ಬರಿಸಿದ್ದರು. ನೆಗೆಟಿವ್ ರೋಲಿಗೆ ಬೇಕಾದ ಕಟ್ಟುಮಸ್ತಾದ ದೇಹಸಿರಿ ಹೊಂದಿರೋ ಕಾಮರಾಜ್ ಈಗ ತಮಿಳುನಾಡಿನಲ್ಲಿ ಒಂದಷ್ಟು ಅವಕಾಶಗಳನ್ನು ಹೊಂದಿದ್ದಾರೆ.
ಯಜಮಾನ ಚಿತ್ರದ ವಿಲನ್ ಪಾತ್ರವೊಂದಕ್ಕೆ ನಿರ್ದೇಶಕರು ಕಾಮರಾಜ್ ಅವರನ್ನು ಸಜೆಸ್ಟ್ ಮಾಡಿದಾಗ ಆತ ಮಾಜಿ ಸೈನಿಕನೆಂಬ ಕಾರಣದಿಂದಲೇ ದರ್ಶನ್ ಖುಷಿಯಿಂದ ಒಪ್ಪಿಕೊಂಡಿದ್ದರಂತೆ. ಇನ್ನೋರ್ವ ಅರುಣ್ ಕೂಡಾ ಭಾರತ ಸೇನೆಯ ಹೆಮ್ಮೆಯ ಯೋಧರಾಗಿದ್ದವರು. ಸೇನೆಯ ಪ್ರಮುಖ ಕಾರ್ಯಚರಣೆಗಳಲ್ಲಿ ಕೆಚ್ಚೆದೆಯಿಂದ ತೊಡಗಿಸಿಕೊಂಡಿದ್ದ ಅರುಣ್ ನಂತರ ದೇಹದಾರ್ಢ್ಯದತ್ತ ಗಮನಹರಿಸಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟನಾಗಿದ್ದಾರೆ. ಇವರೂ ಕೂಡಾ ಕನ್ನಡ ಚಿತ್ರದಲ್ಲಿ ನಟಿಸುವಂತಾದದ್ದು ದರ್ಶನ್ ಅವರ ಪ್ರೀತಿಯಿಂದಲೇ.
ಈ ಇಬ್ಬರೂ ಯೋಧರ ಪಾತ್ರಗಳು ಯಜಮಾನ ಚಿತ್ರದ ಪ್ರಮುಖ ಆಕರ್ಷಣೆಯಂತೆ ಮೂಡಿ ಬಂದಿವೆಯಂತೆ. ಯಜಮಾನ ಚಿತ್ರದ ನಂತರ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ನೆಲೆ ನಿಲ್ಲುವ ಭರವಸೆ ಚಿತ್ರ ತಂಡದ್ದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv