ಮೈಸೂರು: ಅನಾರೋಗ್ಯದಿಂದ ನಟ ದರ್ಶನ್ ಅಭಿಮಾನಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಭಾಸ್ಕರ್ ರೆಡ್ಡಿ(29) ಮೃತ ದುರ್ದೈವಿ. ಭಾಸ್ಕರ್ ರೆಡ್ಡಿ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಆಗಿದ್ದರು.
ಭಾಸ್ಕರ್ ವ್ಯಾಪಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಜೀವನದ ಉತ್ಸಾಹ ಕಳೆದುಕೊಂಡಿದ್ದರು. ಕ್ರಮೇಣ ಭಾಸ್ಕರ್ ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ದರ್ಶನ್ ಅವರನ್ನು ನೋಡಬೇಕೆಂದು ಭಾಸ್ಕರ್ ತಮ್ಮ ಕೊನೆ ಆಸೆ ತಿಳಿಸಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಹೀಗಾಗಿ ಇದೀಗ ದರ್ಶನ್ ಆಗಮಿಸುವವರೆಗೂ ಭಾಸ್ಕರ್ ಅಂತ್ಯಸಂಸ್ಕಾರ ಮಾಡದಂತೆ ಸ್ನೇಹಿತರು ಪಟ್ಟುಹಿಡಿದಿದ್ದಾರೆ.
ಸದ್ಯ ಭಾಸ್ಕರ್ ಮನೆಯವರು ಹಾಗೂ ಸ್ನೇಹಿತರು ನಟ ದರ್ಶನ್ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.