ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈ ನೋವಿನ ನಡುವೆಯೂ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ಕೈ ನೋವಿನ ಬಗ್ಗೆ ಕೇವಲವಾಗಿ ಮಾತನಾಡಿದ ಮಂದಿಗೆ ದರ್ಶನ್ ಆಪ್ತರು ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ದರ್ಶನ್ ಅವರ ಬಲಗೈಗೆ ಹಾಕಿದ ಹೊಲಿಗೆ ಬಿಚ್ಚಿಕೊಂಡಿದೆ. ಪ್ರಚಾರ ಶುರುವಾದ ಬಳಿಕ ದರ್ಶನ್ ಅವರ ಅಪ್ಪಟ ಅಭಿಮಾನಿಗಳು ಶೇಕ್ ಹ್ಯಾಂಡ್ ಮಾಡುತ್ತಿದ್ದಾರೆ. ಇದರಿಂದಾಗಿ ದರ್ಶನ್ ಮತ್ತಷ್ಟು ಕೈ ನೋವಿನ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯ ದರ್ಶನ್ ತಮ್ಮ ಬಲಗೈಗೆ ಬೆಲ್ಟ್ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ.
ಆಕ್ಸಿಡೆಂಟ್ ಆದಾಗ ದರ್ಶನ್ ಕೈ ಹೇಗಿತ್ತು ಎನ್ನುವ ಫೋಟೋ ಈಗ ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದೆ ನಡೆದಿದ್ದ ಕಾರು ಅಪಘಾತದಲ್ಲಿ ದರ್ಶನ್ ಬಲಗೈಗೆ ತೀವ್ರ ಪೆಟ್ಟು ಬಿದ್ದಿತ್ತು. ಈಗಲೂ ಆಗಾಗ ನೋವು ಕಾಣಿಸಿಕೊಳ್ಳುತ್ತಿದೆ. ಒಂದೆರಡು ಬಾರಿ ವಿಪರೀತ ಕೈ ನೋವು ಕಾಣಿಸಿಕೊಂಡಿದ್ದರಿಂದ ಅರ್ಧದಲ್ಲೇ ದರ್ಶನ್ ಪ್ರಚಾರ ಮೊಟಕುಗೊಳಿಸಿದ್ದರು.
2018ರ ಸೆಪ್ಟೆಂಬರ್ 23 ರ ರಾತ್ರಿ ಮೈಸೂರಿನ ಹಿನಕಲ್ ಬಳಿ ದರ್ಶನ್ ಕಾರು ಅಪಘಾತವಾಗಿತ್ತು. ಬಳಿಕ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು.