ಮಂಡ್ಯ: ಪ್ರಧಾನಿ ಮೋದಿ ಅವರು ಬೆಂಬಲ ಸೂಚಿಸಿದ ಬಳಿಕ ನಾವು ಸುಮಲತಾ ಅವರನ್ನು ಬೆಂಬಲಿಸಲ್ಲ ಎಂದು ಮುಸ್ಲಿಂ ಮತದಾರರು ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ಮುಸ್ಲಿಂ ಮತದಾರರ ಓಲೈಕೆಗಾಗಿ ಮುಂದಾಗಿದ್ದಾರೆ.
ನಟ ದರ್ಶನ್ ಇಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆ.ಆರ್.ನಗರದ ಡಿ.ಎಲ್.ಎಸ್ ಚಿತ್ರಮಂದಿರದಿಂದ ಪ್ರಚಾರ ಆರಂಭಿಸಿದ್ದು, ಕೆ.ಆರ್ ನಗರದ ಗೌಸಿಯಾ ಮೊಹಲ್ಲಾದಲ್ಲಿ ವಿಕಲಚೇತನರಾಗಿರುವ ದರ್ಶನ್ ಅಭಿಮಾನಿ ಮುನ್ನಾ ಮನೆ ಇದೆ. ಹೀಗಾಗಿ ಮುಸ್ಲಿಂ ಅಭಿಮಾನಿ ಮುನ್ನಾ ಮನೆಗೆ ಹೋಗಿ ದರ್ಶನ್ ಜ್ಯೂಸ್ ಕುಡಿದಿದ್ದಾರೆ. ಬಳಿಕ ಅಲ್ಲಿಂದ ಮುಸ್ಲಿಂ ಟೋಪಿ, ಪೇಟಾ ಧರಿಸಿ ಮುಸ್ಲಿಮರ ಓಣಿಗಳಲ್ಲಿ ದರ್ಶನ್ ರೋಡ್ ಶೋ ಮಾಡುತ್ತಿದ್ದಾರೆ.
ಉರ್ದು ಭಾಷೆಯಲ್ಲಿ ಮಾತನಾಡಿ ಮುಸ್ಲಿಂ ಮತ ಸೆಳೆಯಲು ಪ್ರಯತ್ನಿಸಿದ್ದಾರೆ. ದಯವಿಟ್ಟು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ಎಲ್ಲರೂ ಸುಮ ಅಮ್ಮನವರಿಗೆ ಮತ ಹಾಕಿ. ಕ್ರಮಸಂಖ್ಯೆ 20ಕ್ಕೆ ಮತ ಚಲಾಯಿಸಿ. ನಿಮ್ಮ ಸೇವೆ ಮಾಡುವ ಅವಕಾಶವನ್ನು ಸುಮಲತಾ ಅವರಿಗೆ ಮಾಡಿಕೊಡಿ ಎಂದು ಉರ್ದು ಭಾಷೆಯಲ್ಲಿ ಮೊದಲಿಗೆ ಸಲಾಂ ಅಲೈಕುಂ ಅಂತ ಹೇಳಿ ದರ್ಶನ್ ಮತಯಾಚನೆ ಮಾಡಿದ್ದಾರೆ.