ಬೆಂಗಳೂರು: ಪರಿಶಿಷ್ಟ ಜಾತಿಗಳ(ಎಸ್.ಸಿ) ಜನಗಣತಿಯಲ್ಲಿ 50%ಕ್ಕಿಂತ ಹೆಚ್ಚು ಜನರು ಭಾಗವಹಿಸಲು ಸಾಧ್ಯವೇ ಇಲ್ಲ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalawadi Narayanswamy) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಜನಗಣತಿ ನಡೆಯುತ್ತಿದೆ. ಆಗುತ್ತಿರುವ ಅನಾಹುತಗಳ ಬಗ್ಗೆ ಮಾಧ್ಯಮಗಳು ತಿಳಿಸುತ್ತಿವೆ. ನಮ್ಮ ಮನೆಗೂ ಯಾರೂ ಬಂದಿಲ್ಲ. ಆದರೆ, ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೃದಯಾಘಾತಕ್ಕೆ ಹದಿ ಹರೆಯದವರು ಸಾವು -ಮಕ್ಕಳಿಗೆ ಶಾಲೆಯಲ್ಲೇ ಟೆಸ್ಟ್ ಮಾಡಿ: ತಜ್ಞರ ಸಮಿತಿ
ಪರಿಶಿಷ್ಟ ಜಾತಿಯವರ ಮನೆಗೆ ಬಂದು ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ. ಅದನ್ನು ನಾವು ಒಪ್ಪಬಹುದಿತ್ತು. ಎಲ್ಲ ಮನೆಗಳಿಗೂ ಸ್ಟಿಕ್ಕರ್ ಅಂಟಿಸಿಕೊಂಡು ಹೋಗುತ್ತಿದ್ದಾರೆ. ಆನ್ಲೈನ್ನಲ್ಲೂ ಅವಕಾಶ ಇದೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಅಲ್ಲಿ ಪರಿಶಿಷ್ಟ ಜಾತಿ ಸರ್ಟಿಫಿಕೇಟ್ ನಂಬರ್ ಹೇಳಬೇಕು. ಬೇರೆ ಬೇರೆ ಮಾಹಿತಿ ಕೇಳುತ್ತದೆ. ಅದನ್ನು ಒದಗಿಸಲು ಸಾಧ್ಯವೇ ಇಲ್ಲ. ಎಲ್ಲರೂ ವಿದ್ಯಾವಂತರಲ್ಲ, ಕೆಲವರಿಗೆ ಸರ್ಟಿಫಿಕೇಟ್ ಇದೆ. ಇನ್ನೂ ಕೆಲವರಿಗೆ ಇಲ್ಲ. ಇದು ಸರ್ಕಾರದ ಕಣ್ಣೊರೆಸುವ ತಂತ್ರವೇ ಹೊರತು, ಇದರಲ್ಲಿ ಸರಿಯಾದ ಅಂಕಿ-ಅಂಶ ಸಿಗಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಳೆ ಪ್ರಮಾಣದಲ್ಲಿ ಚಿರಾಪುಂಜಿ, ಆಗುಂಬೆಯನ್ನು ಹಿಂದಿಕ್ಕಿದ ಉಡುಪಿ
ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಗ್ಗಜಗ್ಗಾಟ ಆರಂಭವಾಗಿದೆ. ಅವರ ಪಕ್ಷದ ಪ್ರತಿಯೊಬ್ಬ ಶಾಸಕರೂ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದಾರೆ. ಖರ್ಗೆಯವರು ಅವರ ಮಾನಸಿಕ ಸ್ಥಿತಿ ಸರಿಯಿಲ್ಲ. ಅವರು ಮನೆಯಲ್ಲಿ ಇರುವುದೇ ಲೇಸು ಎಂದಿದ್ದಾರೆ. ನಿಮ್ಮ ಶಾಸಕರು ನಿಮ್ಮನ್ನು ಯಾವ ಮಟ್ಟಕ್ಕೆ ಗೌರವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯದ ಸಚಿವರಿಗೆ ಪ್ರಚಾರದ ಗೀಳು
ಕೆಲವು ಸಚಿವರು ಅವರ ಸಚಿವ ಸ್ಥಾನದ ವಿಚಾರದಲ್ಲಿ ಕೆಲಸ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಅವರಿಗೆ ಆರೆಸ್ಸೆಸ್, ಬಿಜೆಪಿಯನ್ನು ನಿಂದಿಸಬೇಕು. ಸುಳ್ಳು ಸುದ್ದಿ ಹಬ್ಬಿಸಬೇಕು. ದಿನವೂ ಟಿವಿ ಮಾಧ್ಯಮಗಳಲ್ಲಿ ನಮ್ಮ ಮುಖ ಬರುತ್ತಿರಬೇಕೆಂಬ ಗೀಳಿಗೆ ಬಿದ್ದಿದ್ದಾರೆ. ಪ್ರಿಯಾಂಕ್ ಖರ್ಗೆಯವರು (Priyank Kharge) ಆರೆಸ್ಸೆಸ್ ನಿಷೇಧದ ಮಾತನಾಡಿದ್ದಾರೆ. ನೀವು ಹುಟ್ಟಿದ ಮೇಲೆ ಆರೆಸ್ಸೆಸ್ ಹುಟ್ಟಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಸಿಎಂ ವಿರುದ್ಧ ದೂರು ನೀಡಿಲ್ಲವೇಕೆ?: ವಿಜಯೇಂದ್ರ
ಬಿಜೆಪಿ ಎಂಬ ಹೆಸರು ಮಾತ್ರ ನೀವು ಹುಟ್ಟಿದ ನಂತರ ಹುಟ್ಟಿರಬಹುದು. ಆರೆಸ್ಸೆಸ್ಗೆ 100 ವರ್ಷ ಆಗುತ್ತಿದೆ. ನೆಹರೂ, ಇಂದಿರಾ ಗಾಂಧಿ, ನಿಮ್ಮ ತಂದೆಯವರಿಗೆ ಆರ್ಸ್ಸೆಸ್ ಅನ್ನು ಏನೂ ಮಾಡಲು ಆಗಿಲ್ಲ. ಬಡವರು ನರೇಗದಡಿ ಕೆಲಸ ಮಾಡಿ ಹಣ ಬಂದಿಲ್ಲವೆಂದು ಆರು ತಿಂಗಳಿಂದ ಕಾಯುತ್ತಿದ್ದಾರಲ್ಲವೇ ಅದನ್ನು ಕೊಡಿಸುವ ಯೋಗ್ಯತೆ ನಿಮಗಿದೆಯೇ? ನೀವು ನಿಮ್ಮ ಇಲಾಖೆಯ ಬಗ್ಗೆ ಯಾವಾಗ ಮಾತನಾಡುತ್ತೀರಿ ಪ್ರಶ್ನಿಸಿದ್ದಾರೆ.
ಜನರು ಎಲ್ಲ ಕಡೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ನೀವು ಇಲಾಖೆಗೆ ಸೂಕ್ತರೇ ಎಂದು ಯೋಚಿಸಿ. ನೀವಲ್ಲ, ನಿಮ್ಮ ಯಾವ ಪೀಳಿಗೆ ಬಂದರೂ ಆರೆಸ್ಸೆಸ್ ಅನ್ನು ಮುಗಿಸಲಾಗದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – ಕತಾರ್ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್
ಕೆಲವೆಡೆ ಮಳೆ ಹೆಚ್ಚಳ, ಇನ್ನೂ ಕೆಲವೆಡೆ ಮಳೆ ಇಲ್ಲದೇ ಜನರು ಕಂಗಾಲಾಗಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಇದರ ಬಗ್ಗೆ ಸರ್ಕಾರಕ್ಕೆ ಚಿಂತೆಯೇ ಇಲ್ಲ. ತಮ್ಮ ಹುಳುಕು ಮುಚ್ಚಿಕೊಳ್ಳಲು ಅನೇಕ ವಿಚಾರಗಳನ್ನು ಎತ್ತಿ ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.