ಬೆಂಗಳೂರು: ಎಲ್ಲರೂ ಕೂಡಿ ಬಾಳಿದರೆ ಸ್ವರ್ಗ ಸುಖ, ಸ್ವಾರ್ಥಕ್ಕಾಗಿ ಪಕ್ಷದ ವಿರುದ್ಧ ಯಾರು ಮಾತಾಡಬಾರದು ಎಂದು ಬಿಜೆಪಿಯಲ್ಲಿನ ಭಿನ್ನಮತಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಯತ್ನಾಳ್ ಟೀಂ ಮತ್ತು ವಿಜಯೇಂದ್ರ ಟೀಂ ಕಿತ್ತಾಟಕ್ಕೆ ಪ್ರತಿಕ್ರಿಯೆ ನೀಡಿದರು. ಸದಾನಂದಗೌಡರು ಹೇಳಿರೋದು ಸತ್ಯ. ಚಿನ್ನದ ತಟ್ಟೆಯಲ್ಲಿ ಇಟ್ಟುಕೊಡುತ್ತಿದ್ದಾರೆ. ನಾವು ಅದನ್ನ ಇನ್ನೂ ಕ್ರೀಯಾಶೀಲವಾಗಿ ಬಳಸಿಕೊಳ್ಳಬೇಕು. ಪಕ್ಷ ಯಾರಿಂದಲೂ ಇಲ್ಲ. ಯಾರೇ ಇದ್ದರೂ ಇಲ್ಲದೇ ಇದ್ದರೂ ಪಕ್ಷ ಇರುತ್ತದೆ. ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಬಿಚ್ಚೋರು ಇದ್ದರೆ ಯಾರು ಬೇಕಾದರೂ ಬಿಚ್ಚಲಿ. ನಾನು ಹೇಳೋದು ಕೂಡಿ ಬಾಳಿದರೇ ಸ್ವರ್ಗ ಸುಖ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ನರ್ತನ ಮಾಡುತ್ತಿದೆ. ಇದನ್ನ ನಾವು ಬಳಕೆ ಮಾಡಿಕೊಳ್ಳಬೇಕು. ಸ್ವಾರ್ಥಕ್ಕೆ ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ ಎಂದಿದ್ದಾರೆ.
ಈಗ ವಿಜಯೇಂದ್ರ (B.Y Vijayendra) ರಾಜ್ಯಾಧ್ಯಕ್ಷರು. ಅಧ್ಯಕ್ಷರ ಆದೇಶ ಬಂದಾಗ ನಾವು ಕೆಲಸ ಮಾಡ್ತೀವಿ. ಯತ್ನಾಳ್ರನ್ನು ನಾವು ಕಡೆಗಣಿಸಿಲ್ಲ. ವಿಜಯಪುರದಲ್ಲಿ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಆದರೆ ಅಧ್ಯಕ್ಷರ ತೀರ್ಮಾನವೇ ನಮ್ಮ ಕೆಲಸ. ಈಗ ನನ್ನ ಅಧ್ಯಕ್ಷರು ವಿಜಯೇಂದ್ರ. ಅವರು ಹೇಳಿದಂತೆ ನಾನು ಕೇಳುತ್ತೇನೆ. ಪಕ್ಷದ ಗುಂಪುಗಳ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಪಕ್ಷದ ಗೆರೆ ದಾಟುವುದಿಲ್ಲ ಎಂದಿದ್ದಾರೆ.