ವಿಜಯಪುರ: ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಅವಕಾಶ ನೀಡಬೇಕು. ಕೆಲ ಷರತ್ತುಗಳನ್ನು ಹಾಕಿಯಾದರೂ ಹಬ್ಬದ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ ಒತ್ತಾಯಿಸಿದ್ದಾರೆ.
ನಗರದ ಬಿಎಲ್ಡಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಮನೆ ಮನೆಗೂ ಮಣ್ಣಿನ ಗಣಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಭಯದಲ್ಲೇ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಲೇ ಇದ್ದಾರೆ. ಇದೇ ನೆಪದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸುವುದು ಸರಿಯಲ್ಲ. ಕಳೆದ ಬಾರಿಯೂ ಚೌತಿ ಆಚರಿಸಲಾಗಲಿಲ್ಲ. ಈ ವರ್ಷ ಚೌತಿ ಆಚರಣೆ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು: ಉಮೇಶ್ ಕತ್ತಿ
ಜನರಿಗೆ ಕೋವಿಡ್ ಎಚ್ಚರಿಕೆ ನೀಡಿಯೇ ಗಣೇಶ ಹಬ್ಬ ಆಚರಿಸಲು ಸರ್ಕಾರ ಅವಕಾಶ ನೀಡಬೇಕು. ಹಿಂದೂಗಳು ಎಚ್ಚರ ತಪ್ಪಿ ಹಬ್ಬ ಆಚರಿಸುವುದಿಲ್ಲ. ಎಚ್ಚರಿಕೆಯಿಂದಲೇ ಗಣೇಶ ಹಬ್ಬ ಆಚರಿಸುತ್ತೇವೆ ಎಂದರು.
ಹಿಂದೂ ಧರ್ಮ ಪರಿಸರಕ್ಕೆ ಹಾನಿಯಾಗುವ ಕಾರ್ಯ ಯಾವತ್ತೂ ಮಾಡಿಲ್ಲ. ಆದರೆ ಹಿಂದೂಗಳ ಹಬ್ಬ ಬಂದರೆ ಆಘಾತ ಕಾದಿರುತ್ತದೆ. ದೀಪಾವಳಿಗೆ ಪಟಾಕಿ ಹೊಡೆಯಬೇಡಿ, ಗಣೇಶ ಹಬ್ಬಕ್ಕೆ ಹಾಡು ಹಚ್ಚಬೇಡಿ ಎನ್ನುತ್ತಾರೆ. ಹೀಗಾಗಿ ಹಿಂದೂಗಳಿಗೆ ಆತಂಕ ಇದ್ದೇ ಇದೆ ಎಂದರು.